– ಯಾರಾದ್ರೂ ಸಿಎಂ ಆಗಲಿ ನನಗೆ ಜನ ಮುಖ್ಯ
– ಸರ್ಕಾರ ರಚನೆಗೆ ಮೋದಿ ಆಹ್ವಾನಿಸಿದ್ರು
ಬೆಳಗಾವಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನಂತ ಕೋಮುವಾದಿಯನ್ನು ಹುಡುಕಲಿಕ್ಕೆ ಸಾಧ್ಯನಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕು ಜುಗೂಳ ಗ್ರಾಮದಲ್ಲಿ ಮಾತನಾಡಿದ ಅವರು, ಕೋಮುವಾದಿಗಳಿಗೆ ಕುಮಾರಸ್ವಾಮಿ ಬೆಂಬಲ ನೀಡುತ್ತಾರೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ತೀರುಗೇಟು ನೀಡಿ, ಸಿದ್ದರಾಮಯ್ಯನಂತ ಕೋಮುವಾದಿಯನ್ನು ಹುಡುಕಲಿಕ್ಕೆ ಸಾಧ್ಯನಾ ಎಂದು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಯಾವ ವರ್ಗದ ಜನರಿಗೆ ಸಮುದಾಯ ಭವನಗಳನ್ನು ಕಟ್ಟಲು ಸರ್ಕಾರಿ ಭೂಮಿ ನೀಡಿದರು. ಎಲ್ಲಾ ವರ್ಗದವರನ್ನು ಇವರು ಗೌರವಿಸಿದ್ದಾರಾ? ಯಾರಿಗೆ ಸಮುದಾಯ ಭವನ ನೀಡಿದರು. ಯಾರನ್ನು ಕಡೆಗಣಿಸಿದರು ಎಲ್ಲದರ ಅಂಕಿ ಅಂಶ ಇಡಲಿ. ಇದರ ಬಗ್ಗೆ ಚರ್ಚೆ ಮಾಡಲಿಕ್ಕೆ ಹೋದರೆ ಅವರ ಬಗ್ಗೆ ಬೇಕಾದಷ್ಟು ವಿಷಯಗಳಿವೆ ಎಂದು ಗುಡುಗಿದರು.
ಇದೇ ವೇಳೆ ನಾನು ಯಾರ ಹಂಗಿನಲ್ಲಿಲ್ಲ. ಇಂಥವರಿಗೆ ಬೆಂಬಲ ಕೋಡುತ್ತೇನೆ ಎಂದು ನಾನು ಯಾರಿಗೂ ಬರೆದುಕೊಟ್ಟಿಲ್ಲ. 13 ಜಿಲ್ಲೆಯಲ್ಲಿ ಜನರು ಬೀದಿಗೆ ಬಿದ್ದಿದ್ದಾರೆ. ಪಕ್ಷ ಸಂಘಟನೆ ಮಾಡಿ ಅಧಿಕಾರದ ಬೆನ್ನು ಬಿದ್ದರೆ ಜನ ಏನು ಮಾಡಬೇಕು. ನಾನು ರಾಜಕಾರಣ ಮಾಡೋದು ನನ್ನ ವೈಯಕ್ತಿಕ ಕಾರಣಕ್ಕಾಗಿ ಅಲ್ಲ. ಸರ್ಕಾರ ಬಿದ್ದು ಹೋಗಿ ಗವರ್ನರ್ ಆಡಳಿತ ಬಂದರೆ ಜನರ ಗತಿ ಏನು. ಅದಕ್ಕಾಗಿ ನಾನು ಸರ್ಕಾರ ಇರಬೇಕೊ ಬೇಡವೋ ಎಂದು ವಿಚಾರ ಮಾಡಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಯಾವ ಮುಖ್ಯಮಂತ್ರಿಯಾದರು ಇರಲಿ ಯಾವ ಪಕ್ಷ ಅಧಿಕಾರಕ್ಕಾದರೂ ಬರಲಿ ನನಗೆ ಅದು ಮುಖ್ಯವಲ್ಲ. ನನಗೆ ರಾಜ್ಯದ ಜನರ ಹಿತ ಮಾತ್ರ ಮುಖ್ಯ. ಚುನಾವಣೆಗೆ ಹೋಗೋಣ, ಅದಕ್ಕೇನೂ ಅರ್ಜೆಂಟಿದೆ. ಜನರ ಸಮಸ್ಯೆ ಬಗೆಹರಿಸಲಿ ನಂತರ ಚುನಾವಣೆಗೆ ಹೋಗೋಣ. ರಸ್ತೆಯಲ್ಲಿ ನಿಂತು ಹೇಳೊದು, ಬಾದಾಮಿ ಒಂದು ಕ್ಷೇತ್ರದಲ್ಲಿ ಹೋಗಿ ಬಂದರೆ ಆಗಲ್ಲ. ಬಾದಾಮಿ ಬಿಟ್ಟು ಎಲ್ಲಿಗೆ ಹೋಗಿದ್ದಾರೆ ಸಿದ್ದರಾಮಯ್ಯನವರು ಎಂದು ಹೆಚ್ಡಿಕೆ ಸಿದ್ದು ವಿರುದ್ಧ ಗುಡುಗಿದರು.
ಇದೇ ವೇಳೆ ನಾನು ಬಿಜೆಪಿ ಜತೆ ಸರ್ಕಾರ ಮಾಡೋ ಹಾಗಿದ್ದರೆ ಲೋಕಸಭೆ ಚುನಾವಣೆಗೂ ಮುನ್ನವೇ ಸಪೋರ್ಟ್ ಮಾಡುತ್ತಿದ್ದೆ. ನನಗೆ ಸ್ವತಃ ಪ್ರಧಾನ ಮಂತ್ರಿಗಳಿಂದಲೇ ಆಹ್ವಾನವಿತ್ತು. ನೀವೇ ಮುಖ್ಯಮಂತ್ರಿ ಆಗುವರಂತೆ ಬನ್ನಿ ಎಂದಿದ್ದರು ಎಂದು ಹೊಸ ಬಾಂಬ್ ಸಿಡಿಸಿದರು.