ಧಾರವಾಡ: ಶಿರೀನ್ ಎಂಬ ಯುವತಿಯು ಹುಟ್ಟಿನಿಂದ ಅಂಗವಿಕಲೆಯಾಗಿದ್ದು, ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುತ್ತೇನೆಂಬ ಆತ್ಮ ವಿಶ್ವಾಸವನ್ನು ಹೊಂದಿದ್ದಾಳೆ.
ಶಿರೀನ್ ಕಿತ್ತೂರ್ ಮೂಲತಃ ಧಾರವಾಡದ ಮದಾರಮಡ್ಡಿ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಶಿರೀನ್ ಅಂಗವಿಕಲೆಯಾಗಿದ್ದರೂ ಅಂಗವಿಕಲೆ ಅನ್ನುವುದನ್ನೇ ಮರೆತು ಎಸ್ಎಸ್ಎಲ್ಸಿ ಮುಗಿಸಿದ್ದಾರೆ. ಆದರೆ ಮುಂದಿನ ಶಿಕ್ಷಣಕ್ಕೆಂದು ಕಾಲೇಜಿಗೆ ಹೋದಾಗ ಸಹಪಾಠಿಗಳು ಈಕೆಯ ಅಂಗವಿಕಲತೆಯನ್ನ ನೋಡಿ ಹೀಯಾಳಿಸಿದ್ದರಿಂದ ಮನನೊಂದು ಕಾಲೇಜನ್ನು ಬಿಟ್ಟಿದ್ದಾರೆ.
ಶಿರೀನ್ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಜೀವನಕ್ಕೆ ಮುಂದೆ ಏನಾದರೂ ಮಾಡಲೇ ಬೇಕು ಎಂದು ಹಠ ತೊಟ್ಟು, ತನಗಿರುವ ಅಂಗವಿಕಲತೆಯನ್ನು ಮರೆಮಾಚಿ ಟೈಲರಿಂಗ್ ಕಲಿತಿದ್ದಾರೆ. ಆದರೆ ಈಗ ಇವರ ಅಂಗವಿಕಲತೆಯೇ ಮುಳುವಾಗಿದೆ. ಹೊಲಿಗೆ ಯಂತ್ರ ನಡೆಸಲು ಕಷ್ಟವಾಗುವುದರಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಯಾರಾದರು ದಾನಿಗಳು ಇಲೆಕ್ಟ್ರಿಕ್ ಮಷಿನ್ ಕೊಡಿಸಿದರೆ ಸ್ವಾಭಿಮಾನದಿಂದ ಬದುಕುತ್ತೇನೆ ಎಂದು ಹೇಳುತ್ತಿದ್ದಾರೆ.
ಶಿರೀನ್ ತಂದೆಯು ಗೋವಾದಲ್ಲಿ ಕಟ್ಟಡವೊಂದರ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಶಿರೀನ್ ಗೆ ಇಬ್ಬರು ಸಹೋದರರಿದ್ದು ಪೆಂಟಿಂಗ್ ಕೆಲಸ ಮಾಡುತ್ತಾರೆ. ಅವರೆಲ್ಲರೂ ಬಾಡಿಗೆ ಮನೆಯಲ್ಲಿ ವಾಸವಾಗಿರುವುದರಿಂದ ಇವರಿಗೆ ಜೀವನ ನಡೆಸುವುದು ಕಷ್ಟವಾಗಿದ್ದು, ಎಲೆಕ್ಟ್ರಿಕ್ ಹೊಲಿಗೆ ಯಂತ್ರ ಕೊಡಿಸುವಂತಹ ಶಕ್ತಿಯಿಲ್ಲದಾಗಿದೆ.
ಶಿರೀನ್ ಸಂಬಂಧಿ ಮಹ್ಮದ್ ಯುಸುಫ್ ಮಾತನಾಡಿ, ಸದ್ಯ ಶಿರೀನ್ ಅಂಗವಿಕಲೆ ಆಗಿದ್ದರೂ ಹೇಗಾದರೂ ಮಾಡಿ ಬಟ್ಟೆ ಹೊಲಿದು ತನ್ನ ಜೀವನದಲ್ಲಿ ಬೆಳಕು ಕಾಣುವ ಯತ್ನದಲ್ಲಿದ್ದಾಳೆ. ಇವಳಿಗೆ ಯಾರಾದರೂ ಸಹಾಯ ಮಾಡಿದರೆ ಕಂಡಿತ ಈಕೆಯ ಬಾಳಿಗೆ ಬೆಳಕು ಸಿಗುತ್ತದೆ ಎಂದು ತಿಳಿಸಿದರು.