ಮಡಿಕೇರಿ: ಗ್ರಾಮದಲ್ಲಿ ಹಬ್ಬ, ಸಾವು, ತಿಥಿ, ಹುತ್ತರಿ ಹಾಗೂ ಕೋಲಾಟ ಹಬ್ಬಗಳ ಸಂದರ್ಭದಲ್ಲಿ ಡೋಲು ಬಾರಿಸುವುದು ವೃತ್ತಿಯನ್ನು ಮಾಡಿಕೊಂಡಿರುವವರು ಮೆದರ ಅಚ್ಚಪ್ಪ. ಇವರ ಕುಟುಂಬಕ್ಕೆ ಊರಿನ ಜನರು ನೀಡುತ್ತಿರುವ ವಾರ್ಷಿಕ ವಂತಿಕೆಯೇ ಬದುಕಿಗೆ ಆಧಾರ. ಇದರೊಂದಿಗೆ ಕೂಲಿ ಕೆಲಸದಿಂದ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಅದರೆ ಇವರಿಗೆ ವಾಸಿಸಲು ಮನೆ ಇಲ್ಲ ಎಂಬುವುದು ಗ್ರಾಮ ಪಂಚಾಯತಿ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಇನ್ನು ಅಚ್ಚಪ್ಪ ಅವರ ಅಣ್ಣನ ಪತ್ನಿ ಈ ಹಿಂದೆ ಗ್ರಾಮ ಪಂಚಾಯತಿ ಸದಸ್ಯೆಯಾಗಿದ್ದರೂ ಸರಕಾರದ ಮನೆ ಪಡೆಯಲು ಸಾದ್ಯವಾಗಿಲ್ಲ. ಅಚ್ಚಪ್ಪ ಅವರು ಮನೆ ಮನೆಗೆ ತೆರಳಿ ಭತ್ತದ ಹುಲ್ಲು, ಬಿದಿರು ಪ್ಲಾಸ್ಟಿಕ್ ಹಾಳೆಗಳನ್ನು ಸಂಗ್ರಹಿಸಿ ಮಳೆ ಗಾಳಿಯಿಂದ ರಕ್ಷಿಸಲು ಒಂದು ಸೂರು ನಿರ್ಮಿಸಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಅಚ್ಚಪ್ಪನವರು ಪತ್ನಿಯನ್ನು ಕಳೆದುಕೊಂಡಿದ್ದು ಒಂಟಿ ಜೀವನ ಸಾಗಿಸುತ್ತಿದ್ದಾರೆ. ಮನೆಯೇ ಇಲ್ಲದ ಮೇಲೆ ಶೌಚಾಲಯದ ಮಾತೇ ಇಲ್ಲ. ವಿಪರ್ಯಾಸ ಅಂದರೆ ಇವರು ವಾಸಿಸುವ ನಾಪೋಕ್ಲ್ ಗ್ರಾಮ ಪಂಚಾಯತಿಗೆ ಶೌಚಮುಕ್ತ ಗ್ರಾಮ ಎಂಬ ಹೆಗ್ಗಳಿಕೆ ಲಭಿಸಿರುವುದು ವ್ಯವಸ್ಥೆಯಲ್ಲಿನ ಲೋಪಕ್ಕೆ ಸಾಕ್ಷಿಯಾಗಿದೆ.
ಗ್ರಾಮೀಣ ಕಲಾವಿದ ಅಚ್ಚಪ್ಪ ಅವರು ಅನೇಕ ಬಾರಿ ಅಶ್ರಮ ಮನೆ ನಿರ್ಮಿಸಲು ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿದರೂ ಇದುವರೆಗೂ ದೊರೆತಿಲ್ಲ. ಸೂರಿನ ಕನಸನ್ನು ನನಸು ಮಾಡಿಕೊಳ್ಳಲು ಈ ಬಡ ಕಲಾವಿದ ಬೆಳಕು ಕಾರ್ಯಕ್ರಮಕ್ಕೆ ಬಂದು ಸಹಾಯ ಕೋರಿದ್ದಾರೆ.
https://www.youtube.com/watch?v=XxGHSO3TWhs