ರಾಯಚೂರು: ನಗರದ ಅಂಗವಿಕಲ ದಂಪತಿ ಬದುಕಿಗೆ ಬೇಕಿದೆ ಆಸರೆಯ ಬೆಳಕುಒಂದು ಕಾಲದಲ್ಲಿ 10 ಜನರಿಗೆ ಕೆಲಸ ಕೊಟ್ಟು ಇಡೀ ಮನೆಯ ಜವಾಬ್ದಾರಿ ಹೊತ್ತ ಹೆಣ್ಣುಮಗಳು ಈಗ ಕಷ್ಟದಲ್ಲಿ ಕೈತೊಳೆಯುತ್ತಿದ್ದಾಳೆ.
ಪೊಲೀಯೋದಿಂದ ಚಿಕ್ಕವಯಸ್ಸಿನಲ್ಲೇ ಎರಡು ಕಾಲು ಕಳೆದುಕೊಂಡರು ಛಲದಿಂದ ಕಟ್ಟಿಕೊಂಡ ಬದುಕು ಮದುವೆಯ ನಂತರ ಬದಲಾಗಿ ಹೋಗಿದೆ. ಪತಿಯೂ ಅಂಗವಿಕಲನಾಗಿದ್ದು ಮದುವೆಯಾದ ಮೇಲೆ ಸಂಬಂಧಿಕರೆಲ್ಲಾ ದೂರವಾಗಿ ದಂಪತಿಗಳು ಜೀವನ ನಡೆಸಲು ಹೋರಾಟವನ್ನೇ ನಡೆಸಿದ್ದಾರೆ. ರಾಯಚೂರಿನ ಈ ಅಂಗವಿಕಲ ದಂಪತಿ ಬದುಕಿಗೊಂದು ಆಸರೆಯಾಗುವ ಬೆಳಕು ಬೇಕಿದೆ.
ಹೀಗೆ ಕಷ್ಟ ಪಟ್ಟು, ಸೈಕಲ್ ತುಳಿಯುತ್ತಿರುವ ವ್ಯಕ್ತಿಯ ಹೆಸರು ಖಾಜಾ ಪಾಷಾ, ತೆವಳುತ್ತಾ ಬರುತ್ತಿರುವ ಮಹಿಳೆಯ ಹೆಸರು, ಶಬಾನ ಬೇಗಂ, ಜೊತೆಯಲ್ಲಿ ಒಂದು ಹೆಣ್ಣು ಮಗು ಇದು ಇವರ ಕುಟುಂಬ. ರಾಯಚೂರಿನ ತಾರನಾಥ ರಸ್ತೆ ಪ್ರದೇಶದ ನಿವಾಸಿಗಳು. ಚಿಕ್ಕವಯಸ್ಸಿನಲ್ಲೇ ಪೊಲೀಯೋದಿಂದ ಕಾಲು ಕಳೆದುಕೊಂಡ ನತದೃಷ್ಠವಂತರು.
ಒಳ್ಳೆಯ ಮನೆತನದಲ್ಲೇ ಬೆಳೆದ ಶಬಾನ ಬೇಗಂ ಮದುವೆಗೂ ಮುನ್ನ ತವರು ಮನೆ ದೇವದುರ್ಗದಲ್ಲಿ ಗುಜರಿ ಅಂಗಡಿ ನಡೆಸಿ ಪ್ರತಿ ದಿನ 50 ಸಾವಿರ ರೂ. ವ್ಯಾಪಾರ ಮಾಡುತ್ತಿದ್ದರು, 10 ಮಂದಿಗೆ ಕೆಲಸ ನೀಡಿದ್ರು. ಇದನ್ನ ಗುರುತಿಸಿದ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯ 2013ರಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಇತ್ತ ಖಾಜಾ ಪಾಷಾ ತನ್ನ ಕುಟುಂಬಸ್ಥರ ಜೊತೆ ಚೆನ್ನಾಗೇ ಅನ್ಯೋನ್ಯವಾಗಿದ್ರು. ಆದರೆ ವಿಧಿ, ಇವರು ಮದ್ವೆಯಾದ ನಂತರ ಬದುಕೇ ಬದಲಾಯಿಸಿದೆ. ಎರಡೂ ಮನೆಯವರು ಕೈ ಬಿಟ್ಟಿದ್ದಾರೆ.
ಸದ್ಯ ಮನೆಗೆ 1500 ರೂಪಾಯಿ ಬಾಡಿಗೆ ಕೊಟ್ಟು ಮನೆಯ ಮುಂದೆಯೇ ಸಣ್ಣ ಕಿರಾಣಿ ಅಂಗಡಿಯಿಟ್ಟುಕೊಂಡು, ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ಜೀವನ ಮಾಡುತ್ತಿದ್ದಾರೆ. ಸಂಕಷ್ಟದಲ್ಲಿ ಜೀವನ ಮಾಡುತ್ತಿರುವ ವಿಕಲಚೇತನ ದಂಪತಿಗಳು ಸ್ವಾಭಿಮಾನದ ಜೀವನ ಕಟ್ಟಿಕೊಳ್ಳಲು, ಯಾರಾದ್ರೂ ದಾನಿಗಳು ಒಂದು ಅಂಗಡಿ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
https://www.youtube.com/watch?v=MeIcb674Ec4