ಕೋಲಾರ: ಕನಿಷ್ಠ ಸೌಲಭ್ಯಗಳಿಂದ ವಂಚಿತವಾಗಿರುವ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಗ್ರಾಮದ ಹೆಸರು ಕಂಬಿಪುರ. ಗ್ರಾಮದಲ್ಲಿ 80 ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ ಶೇ. 100ರಷ್ಟು ದಲಿತ ಕುಟುಂಬಗಳೇ ವಾಸವಾಗಿವೆ.
ದುರಂತ ಅಂದ್ರೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳೇ ಕಳೆದ್ರೂ ಈ ಗ್ರಾಮಕ್ಕೆ ರಸ್ತೆ ಇಲ್ಲದಿರುವುದು. ರಸ್ತೆ ಮಾಡಿಕೊಡಿ ಸ್ವಾಮಿ ಅಂತ ಕಾಲಿಗೆ ಬಿದ್ದು ಅಂಗಲಾಚಿದ್ರೂ ಕೂಡ ರಸ್ತೆ ಮಾಡಿಲ್ಲ. ಅಷ್ಟೆ ಅಲ್ಲ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳು ಕೂಡ ಇಲ್ಲ. ಈ ಹಿಂದೆ ಅನೇಕ ಪ್ರತಿಭಟನೆ ಹೋರಾಟಗಳನ್ನು ಮಾಡಲಾಗಿದೆ. ಮತದಾನ ಬಹಿಷ್ಕಾರ ಮಾಡಿದ್ರು ಯಾರೊಬ್ಬರೂ ಕರುಣೆ ತೋರಿಲ್ಲ. ಸರಿಯಾದ ರಸ್ತೆ ಇಲ್ಲದಿರುವುದರಿಂದ ಮಕ್ಕಳು, ಮಹಿಳೆಯರು ಪ್ರತಿನಿತ್ಯ ಇನ್ನಿಲ್ಲದ ಸಂಕಟ ಅನುಭವಿಸುತ್ತಿದ್ದಾರೆ.
ಗ್ರಾಮದ ದುಸ್ಥಿತಿಯನ್ನ ಕಂಡ ಕೆನರಾ ಬ್ಯಾಂಕ್ 2 ವರ್ಷಗಳ ಹಿಂದೆ ಗ್ರಾಮವನ್ನ ದತ್ತು ಪಡೆದಿದೆ. ಅಂದು ಶುದ್ಧ ಕುಡಿಯುವ ನೀರಿನ ಘಟಕ ಮಾಡಿ ಹೋದವರು ಇದುವರೆಗೂ ಗ್ರಾಮದ ಕಡೆ ತಿರುಗಿಯೂ ನೋಡಿಲ್ಲ. ನಮಗೆ ಬೇರೆನೂ ಬೇಡ, ರಸ್ತೆಯನ್ನ ಮಾಡಿಕೊಟ್ರೆ ಸಾಕು. ನಮ್ಮ ಜೀವನ ನಾವು ಮಾಡಿಕೊಳ್ಳುತ್ತೇವೆ. ಗ್ರಾಮಕ್ಕೆ ಹೊಂದಿಕೊಂಡಂತೆ ಕೆರೆ, ರಾಜ ಕಾಲುವೆ, ಖಾಸಗಿ ಜಮೀನು ಇದೆ. ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ಈ ಗ್ರಾಮದ ನೆರವಿಗೆ ಬರಬೇಕಿದೆ ಅಂತಾರೆ ಗ್ರಾಮಸ್ಥರು.
ಒಟ್ಟಿನಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಗ್ರಾಮಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಕಾಯಕಲ್ಪ ಬೇಕಾಗಿದೆ. ರಸ್ತೆಗಾಗಿ ಗ್ರಾಮದವರು ಸದ್ಯ ಪಬ್ಲಿಕ್ ಟಿವಿಯಿಂದ ಬೆಳಕಿನ ಆಸರೆ ಬಯಸಿದ್ದಾರೆ.