ಕಲಬುರಗಿ: ಬಾನಾಡಿಗಳ ಪ್ರೇಮಿ ಅಂತಾ ಪ್ರಖ್ಯಾತಿ ಪಡೆದು ಪಬ್ಲಿಕ್ ಹೀರೋ ಆಗಿದ್ದ ಕಲಬುರಗಿಯ ಕಮಲಾಕರ್ ಪಂಚಾಳ ಇದೀಗ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರಿಗೆ ಪ್ರತಿ ತಿಂಗಳು ಸುಮಾರು 5 ಸಾವಿರ ರೂಪಾಯಿಯ ಔಷಧಿ ಬೇಕಾಗಿದೆ. ಆದರೆ ಆರ್ಥಿಕ ಸಮಸ್ಯೆಯಿಂದ ಔಷಧಿ ಖರೀದಿಸಲು ಇದೀಗ ನೇರವಿಗಾಗಿ ಕಾಯುತ್ತಿದ್ದಾರೆ.
ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದ ನಿವಾಸಿಯಾಗಿದ್ದಾರೆ ಕಮಲಾಕರ ಪಂಚಾಳ ಪಕ್ಷಿಗಳಿಗಾಗಿ ಮುಚ್ಚಳದ ಮೂಲಕ ನೀರು ಮತ್ತು ಆಹಾರ ಹಾಕುವ ಮೂಲಕ ಪಬ್ಲಿಕ್ ಹೀರೋ ಆಗಿದ್ದರು.
ಬೇಸಿಗೆ ಕಾಲದಲ್ಲಿ ಇಲ್ಲಿನ ಕೆರೆ-ಕಟ್ಟೆಗಳು ಒಣಗಿದ ಪರಿಣಾಮ ಸಾವಿರಾರು ಪಕ್ಷಿಗಳು ನೀರಿಲ್ಲದೆ ಸಾವನಪ್ಪುತ್ತಿದ್ದವು. ಇದನ್ನು ಅರಿತ ಕಮಲಾಕರ ಪಂಚಾಳ ಮರಗಳಿಗೆ ಮುಚ್ಚಳ ಕಟ್ಟಿ ಕಳೆದ 17 ವರ್ಷಗಳಿಂದ ಬಾನಾಡಿಗಳಿಗೆ ನೀರುಣಿಸುತ್ತಿದ್ದಾರೆ. ಇದನ್ನು ತಿಳಿದ ಪಬ್ಲಿಕ್ ಟಿವಿ ಪಂಚಾಳ ಅವರನ್ನು ಪಬ್ಲಿಕ್ ಹೀರೋ ಅಂತಾ ಬಿಗ್ ಬುಲೆಟಿನ್ನಲ್ಲಿ ಅವರ ನಿಸ್ವಾರ್ಥ ಸೇವೆ ಕುರಿತು ಮೊದಲ ವರದಿ ಪ್ರಸಾರ ಮಾಡಿತ್ತು. ನಂತರ ಬೆಳಕು ಕಾರ್ಯಕ್ರಮದ ಮೂಲಕ ಅವರಿಗೆ ದಾನಿಗಳಿಂದ ಟಿವಿಎಸ್ ವಾಹನವನ್ನು ನೀಡಲಾಗಿತ್ತು. ಆದ್ರೆ ಇದೀಗ ಅದೇ ಪಂಚಾಳ ಅವರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಪರದಾಡುತ್ತಿದ್ದಾರೆ.
ಸದ್ಯ ಪಂಚಾಳ ಅವರಿಗೆ ಪುತ್ರ ರವೀಂದ್ರ ಕುಮಾರ್, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಆದ್ರೆ ಪಂಚಾಳ ಅವರಿಗೆ ಇಂದಿಗೂ ಪ್ರತಿ ತಿಂಗಳು 4 ರಿಂದ 5 ಸಾವಿರ ರೂಪಾಯಿ ಔಷಧಿಗಾಗಿ ಹಣ ಬೇಕಾಗಿದೆ. ಈ ಹಣ ಜೋಡಿಸಲು ಪಂಚಾಳ ಅವರಿಗೆ ತುಂಬಾ ಕಷ್ಟವಾಗುತ್ತಿದ್ದು, ಯಾರಾದ್ರೂ ದಾನಿಗಳು ಸಹಾಯ ಮಾಡಲಿ ಅಂತಾರೆ ಐನಾಪುರ ಗ್ರಾಮದ ಜನ.
ಪಂಚಾಳ ಹೀಗೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರೂ ಕೂಡ ಇದೀಗ ಮತ್ತೆ ಪಕ್ಷಿಗಳಿಗೆ ನೀರುಣಿಸಲು ಸಿದ್ದರಾಗಿದ್ದಾರೆ. ಹೀಗಾಗಿ ಯಾರಾದ್ರೂ ದಾನಿಗಳು ಮುಂದೆ ಬಂದು ಪಂಚಾಳ ಅವರಿಗೆ ಔಷಧಿಯ ವೆಚ್ಚ ನೀಡಬೇಕಾಗಿದೆ. ಅದೇ ನಿರೀಕ್ಷೆಯಲ್ಲಿ ಇದೀಗ ಪಂಚಾಳ ಮತ್ತೆ ಇದೀಗ ಪಬ್ಲಿಕ್ ಟಿವಿಯ ಮುಖಾಂತರ ದಾನಿಗಳಲ್ಲಿ ವಿನಂತಿಸುತ್ತಿದ್ದಾರೆ.