ಬೆಂಗಳೂರು: ಖಾಸಗಿ ಶಾಲೆಗಳ ಹಾವಳಿಗಳ ನಡುವೆ ಗ್ರಾಮೀಣ ಪ್ರದೇಶದ ಹಳ್ಳಿಗಾಡುಗಳ ಸರ್ಕಾರಿ ಶಾಲೆಗಳು ಅವನತಿಯತ್ತ ಮುಖಮಾಡಿವೆ. ಆದರೆ ಈ ಸರ್ಕಾರದ ಅನುದಾನ, ಗ್ರಾಮಸ್ಥರ ಹಾಗೂ ಹಳೇ ವಿದ್ಯಾರ್ಥಿಗಳ ನೆರವಿನಿಂದ ಎಲ್ಲಾ ರೀತಿಯಲ್ಲೂ ಸದೃಢವಾಗಿ ಮಕ್ಕಳಿಗೆ ಓದಿಕಲಿಸಲು ಪೂರಕವಾಗಿದೆ. ಆದ್ರೆ ಮಕ್ಕಳಿಗೆ ಪ್ರಚಲಿತ ವಿದ್ಯಾಮಾನದ ಕೊರತೆ ಎದ್ದುಕಾಣುತ್ತಿತ್ತು. ಇದೀಗ ಪಬ್ಲಿಕ್ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳಿಗೆ ಪ್ರೊಜೆಕ್ಟರ್ ಜೊತೆಗೆ ಒಂದು ಕಂಪ್ಯೂಟರ್, ಯುಪಿಎಸ್, ಮೈಕ್ ಸಿಸ್ಟಮ್ ಗಳನ್ನು ದಾನಿಗಳು ನೀಡಿದ್ದಾರೆ.
ಹೌದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಾಚೋನಾಯಕನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಖಾಸಗಿ ಶಾಲೆಗಳ ಹಾವಳಿಗಳ ನಡುವೆ ಈ ಸರ್ಕಾರಿ ಶಾಲೆ, ಶಿಕ್ಷಕರ ಕೌಶಲ್ಯದಿಂದ 2014 ರಲ್ಲಿ ಜಿಲ್ಲಾ ಪರಿಸರ ಮಿತ್ರ ಶಾಲೆ, ಪರಿಸರ ದೇಗುಲ ಎಂದು ಪ್ರಶಸ್ತಿಗೆ ಭಾಜನವಾಗಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯಿಂದ ಬಿರುದು ಗಳಿಸಿರುವ ಏಕೈಕ ಶಾಲೆಯಾಗಿದೆ.
ಆದ್ರೆ, ಈ ಶಾಲೆಯಲ್ಲಿ ಮಕ್ಕಳಿಗೆ ಆಧುನೀಕರಣದ ನಿಟ್ಟಿನಲ್ಲಿ ಓದಿ ಕಲಿಯಲು ಪ್ರೊಜೆಕ್ಟರ್ ನೆರವನ್ನ ಕೋರಿದ್ದರು. ಈ ಬಗ್ಗೆ ಪಬ್ಲಿಕ್ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ಪ್ರಸಾರವಾದ ವರದಿಯಿಂದ ಎಚ್ಚೆತ್ತ, ಇದೇ ಶಾಲೆಯ ಹಳೇ ವಿದ್ಯಾರ್ಥಿ, ಬೂದಿಹಾಳ್ ಗ್ರಾಮ ಪಂಚಾಯಿತಿಯ ಅಧ್ಯಕ್ಷ ನಾಗರಾಜು ಹಾಗೂ ಇನ್ನಿತರರು ಪ್ರೊಜೆಕ್ಟರ್ ಜೊತೆಗೆ ಒಂದು ಕಂಪ್ಯೂಟರ್, ಯುಪಿಎಸ್, ಮೈಕ್ ಸಿಸ್ಟಮ್ ನೀಡಿ ಮಕ್ಕಳ ಏಳಿಗೆಗೆ ಕಾರಣರಾಗಿದ್ದಾರೆ.
ಇನ್ನು ದಾನಿಗಳ ನೆರವಿನಿಂದ ಶಾಲೆಗೆ ಪ್ರೊಜೆಕ್ಟರ್ ಜೊತೆಗೆ ಒಂದು ಕಂಪ್ಯೂಟರ್, ಯುಪಿಎಸ್, ಮೈಕ್ ಸಿಸ್ಟಮ್ಗಳನ್ನ, ನೆಲಮಂಗಲ ತಾಲೂಕು ಶಿಕ್ಷಣಾಧಿಕಾರಿ ಹನುಮನಾಯಕ್, ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಗ್ರಾಮಸ್ಥರು ಉದ್ಘಾಟಿಸಿದರು. ಶಾಲೆಯ ಪುಟಾಣಿ ಮಕ್ಕಳು ಸಂತಸದಿಂದಲೇ ಎಲ್ಲಾ ಉಪಕರಣಗಳನ್ನ ನೋಡಿ ಖುಷಿ ಪಟ್ಟು ಸೂಕ್ಷ್ಮವಾಗಿ ವೀಕ್ಷಿಸಿದರು. ಅಲ್ಲದೆ ಪ್ರೊಜಕ್ಟರ್ನಿಂದ ವಿಡಿಯೋ ಪಾಠ ಪ್ರವಚನಗಳನ್ನ ವೀಕ್ಷಿಸಿದರು.
ಬೂದಿಹಾಳ್ ಗ್ರಾಮ ಪಂಚಾಯಿತಿಯ ಅಧ್ಯಕ್ಷ ನಾಗರಾಜು ಮಾತನಾಡಿ, ದಾನ ಮಾಡುವುದು ಮುಖ್ಯವಲ್ಲ, ಅದನ್ನ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಓದಿನೆಡೆಗೆ ಗಮನವರಿಸಬೇಕು. ಆಗಲೇ ಬೆಳಕು ಕಾರ್ಯಕ್ರಮ ಯಶಸ್ವಿ ಆಗಲು ಸಾಧ್ಯ. ಈ ನಿಟ್ಟಿನಲ್ಲಿ ಪಬ್ಲಿಕ್ಟಿವಿ ಉತ್ತಮ ಕೆಲಸ ಮಾಡುತ್ತದೆ ಎಂದು ದಾನಿಗಳು ಸಂತಸವನ್ನ ವ್ಯಕ್ತಪಡಿಸಿದರು.
ಒಟ್ಟಾರೆ ಖಾಸಗಿ ಶಾಲೆಗಳ ಹಾವಳಿಗಳ ಮಧ್ಯೆ ಸರ್ಕಾರಿ ಶಾಲೆ, ರಾಜ್ಯಕ್ಕೆ ಮಾದರಿಯಾಗಿದೆ. ಈ ಗ್ರಾಮೀಣ ಶಾಲೆಯ ಮಕ್ಕಳು ಇನ್ನಷ್ಟು ಓದಿಕಲಿಯಲು ಹಾಗೂ ಪ್ರಚಲಿತ ವಿದ್ಯಮಾನದ ಅರಿವು ಪಡೆಯಲು, ಸ್ಮಾರ್ಟ್ಕ್ಲಾಸ್ ಯೋಜನೆಗಾಗಿ ಪ್ರೋಜೆಕ್ಟರ್ ನೆರವಿನ ಮಕ್ಕಳ ಕನಸು ನನಸಾಗಿದೆ.