ರಾಯಚೂರು: ರಾಯಚೂರಿನ ನಾಗಲಾಪುರ ಗ್ರಾಮದ ರೈತ ಗುಂಡಪ್ಪ ಎಂಬವರಿಗೆ ಮೂವರು ಮಕ್ಕಳು ಅಂಧರಾಗಿ ಹುಟ್ಟಿದ್ದಾರೆ. ಈ ಮೂವರಲ್ಲಿ ನವೀನ್ ಕೂಡ ಒಬ್ಬರಾಗಿದ್ದಾರೆ. ನವೀನ್ ಗೆ ಓದಿನಲ್ಲಿ ವಿಪರೀತ ಆಸಕ್ತಿ, ಕೀಬೋರ್ಡ್ ನುಡಿಸಿ ಏನಾದ್ರೂ ಸಾಧಿಸಬೇಕೆಂಬ ಹಂಬಲವಿತ್ತು. ವಿದ್ಯಾಭ್ಯಾಸ ಮತ್ತು ಕೀಬೋರ್ಡ್ ಗಾಗಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಸಹಾಯ ಯಾಚಿಸಿ ಬಂದಿದ್ದ ನವೀನ್ನ ಕನಸು ಇಂದು ನನಸಾಗಿದೆ.
ಓದಿನಲ್ಲಿ ಎಂದೂ ಹಿಂದೆ ಬೀಳದೆ ಹಿಂದುಸ್ತಾನಿ ಸಂಗೀತದಲ್ಲೂ ಫಸ್ಟ್ ಕ್ಲಾಸ್ನಲ್ಲಿ ಜೂನಿಯರ್ ಮುಗಿಸಿದ್ದಾರೆ. ಬಿಸಿಎಂ ವಸತಿ ನಿಲಯದಲ್ಲಿ ವಾಸವಾಗಿ ಇನ್ ಫ್ಯಾಂಟ್ ಜೀಸಸ್ ಕಾಲೇಜಿನಲ್ಲಿ ಪಿಯುಸಿ ಕಲಾ ವಿಭಾಗದಲ್ಲಿ ಓದುತ್ತಿರುವ ನವೀನ್ ಈಗ ಎಲ್ಲಾ ಚಿಂತೆ ಮರೆತು ಓದು ಹಾಗೂ ಸಂಗೀತದಲ್ಲಿ ಸಾಧನೆ ಮಾಡುತ್ತಿದ್ದಾರೆ.
ನವೀನ್ಗೆ ಅವಶ್ಯವಿದ್ದ ಕೀಬೋರ್ಡ್ ನ್ನ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ವೀಕ್ಷಿಸಿದ್ದ ಮಲ್ಲಿಕಾರ್ಜುನ ಸ್ವಾಮಿ, ಶಂಕರ್, ರಾಕೇಶ್ ಹಾಗೂ ಅಶೋಕ್ ಜೈನ್ ಒಟ್ಟಾಗಿ ಖರೀದಿಸಿ ಕೊಟ್ಟಿದ್ದಾರೆ. ಪಬ್ಲಿಕ್ ಟಿವಿಗೆ ಸ್ಪಂದಿಸಿದ ಇನ್ ಫ್ಯಾಂಟ್ ಜೀಸಸ್ ಕಾಲೇಜು ನವೀನ್ನಿಂದ ಅತ್ಯಲ್ಪ ಶುಲ್ಕ ಮಾತ್ರ ಪಡೆದು ಸಾಧನೆಗೆ ಸಹಾಯ ಮಾಡುತ್ತಿದೆ.
ಸಾಧನೆಗೆ ದೈಹಿಕ ಅಂಗವಿಕಲತೆ ಮುಖ್ಯವಲ್ಲ ಅನ್ನೋದನ್ನ ಸಮಾಜಕ್ಕೆ ತೋರಿಸಬೇಕು ಅಂತ ಹಠಕ್ಕೆ ಬಿದ್ದಿರುವ ನವೀನ್ ಗೆ ಸಹಾಯಹಸ್ತ ಸಿಕ್ಕಿದೆ. ಎಲೆಮರೆ ಕಾಯಿಯಂತಿರುವ ಸಂಗೀತ ಪ್ರತಿಭೆ ನವೀನ್ ತನ್ನ ಸಾಧನೆ ಮೂಲಕ ಎತ್ತರಕ್ಕೆ ಬೆಳೆಯಲಿ ಅನ್ನೋದಷ್ಟೆ ನಮ್ಮ ಆಶಯ.
https://www.youtube.com/watch?v=QxiIUnZZEP0