ಬೆಳಗಾವಿ: ಗುರುವಿಲ್ಲದೆ ಯೋಗ ಕಲಿತ ಆಧುನಿಕ ಏಕಲವ್ಯ ಇವರು. ಗುರು ರಾಮದೇವ ಬಾಬಾ ಅವರ ಯೋಗಾಸನವನ್ನು ಟಿವಿಯಲ್ಲಿ ನೋಡಿ ಕಲಿತಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗುರಗೊಳದ ಅನಕ್ಷರಸ್ಥ ಯುವಕ ಬುಡನ್ ಇತರರಿಗೆ ಯೋಗಾಭ್ಯಾಸ ಹೇಳಿಕೊಡಲು ಸಹಾಯ ಹಸ್ತ ಚಾಚಿದ್ದಾರೆ.
ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಇವರಿಗೆ ಯೋಗಾಸನ ಮಾಡುವದೆಂದರೆ ಎಲ್ಲಿಲ್ಲದ ಖುಷಿ. ನಿರಂತರ ಯೋಗ ಅಭ್ಯಾಸ ಮಾಡುವುದು, ಮುರ್ನಾಲ್ಕು ದಿನಗಳ ಕಾಲ ಅನ್ನ ನೀರು ಸೇವಿಸದೆ ಇರುವುದು ಬುಡನ್ ಹವ್ಯಾಸ. ದಿನಕ್ಕೆರಡು ಬಾರಿ ಯೋಗಾಸನ ಮಾಡುವ ಕಾರಣ ಅತ್ಯಂತ ಕ್ಲಿಷ್ಟಕರ ಆಸನಗಳೂ ಬುಡನ್ ಗೆ ಒಲಿದಿವೆ.
ಅನಕ್ಷರಸ್ಥರಾದ ಇವರು ಉತ್ತಮ ಆರೋಗ್ಯದ ಅರಿವು ಮೂಡಿಸುವ ನಿಟ್ಟಿನಲ್ಲಿ ಯೋಗಾಭ್ಯಾಸವನ್ನು ಜನರಿಗೆ ಹೇಳಿಕೊಡಬೇಕು ಎಂಬ ಇಚ್ಛೆಯಿದೆ. ಆದರೆ ನಾನು ಅನಕ್ಷರಸ್ಥ ಎಂಬ ಆತಂಕ ಮನದಲ್ಲಿ ಭೀತಿ ಹುಟ್ಟಿಸಿದೆ. ಅದಕ್ಕಾಗಿ ಇರಲು ಒಂದು ಸೂರು, ಜೊತೆಗೆ ವ್ಯಕ್ತಿತ್ವ ವಿಕಾಸನದ ತರಬೇತಿ ಬೇಕಾಗಿದೆ ಎಂದು ಬುಡನ್ ಹೇಳುತ್ತಾರೆ.
ಕಲಿಯುವ, ಕಲಿಸುವ ಹುಮ್ಮಸ್ಸು, ಶ್ರಮ ಜೊತೆಗೆ ಕಠಿಣ ಪರಿಶ್ರಮಪಟ್ಟು ಜೀವನದಲ್ಲಿ ಮುಂದೆ ಬರಬೇಕು ಎಂಬುದು ಇವರ ಜೀವನದ ಗುರಿ. ಆದರೆ ಕಿತ್ತು ತಿನ್ನುವ ಬಡತನ ಗುರಿ ತಲುಪಲು ಬೀಡುತ್ತಿಲ್ಲ. ಸೂಕ್ತ ಮಾರ್ಗದರ್ಶಕರು ಸಿಕ್ಕಲ್ಲಿ ಯೋಗದಲ್ಲಿಯೇ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬುವ ತವಕ ಬುಡನ್ ಹೊಂದಿದ್ದಾರೆ.