ಬೆಳಗಾವಿ: ವಿಧಾನಸಭಾ ಕಲಾಪದಲ್ಲಿ ಆರಂಭದಲ್ಲೇ ಇಂದು ಬಿಜೆಪಿ ಮತ್ತು ಕಾಂಗ್ರೆಸ್ (BJP, Congress) ನಾಯಕರು ಸಿಬಿಐ ತನಿಖೆಗೆ ಆಗ್ರಹಿಸಿದ ಪ್ರಸಂಗ ನಡೆಯಿತು.
ಸದನ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ಖಾದರ್ (UT Khader) ಅವರು ಉತ್ತರ ಕರ್ನಾಟಕ (North Karnaataka) ಭಾಗದ ಚರ್ಚೆಗೆ ಅವಕಾಶ ನೀಡಿದರು. ಈ ವೇಳೆ ಪ್ರತಿಪಕ್ಷ ನಾಯಕ ಅಶೋಕ್ (Ashok) ಅವರು ವಕ್ಫ್ ವಿಚಾರವನ್ನು ಪ್ರಸ್ತಾಪ ಮಾಡಿದರು.
ಪ್ರಿಯಾಂಕ್ ಖರ್ಗೆ (Priyank Kharge) ವಿಜಯೇಂದ್ರ ವಿರುದ್ಧ ಮೊನ್ನೆ ಆರೋಪ ಮಾಡಿದ್ದಾರೆ. ಆದರೆ ಅವರು ಮಾತನಾಡುವುದಕ್ಕೆ ಮೊದಲೇ ನೋಟಿಸ್ ನೀಡಬೇಕಿತ್ತು ಎಂದು ಹೇಳಿ ವಿರೋಧ ವ್ಯಕ್ತಪಡಿಸಿದರು.
ಇದಕ್ಕೆ ಪ್ರಿಯಾಂಕ್ ಖರ್ಗೆ, ನಾನು ಆರೋಪ ಮಾಡಿದ್ದಲ್ಲ, ಮಾಣಿಪ್ಪಾಡಿ (Anwar Manippady) ಆರೋಪ ಮಾಡಿದ್ದು, ಅದನ್ನೇ ನಾನು ಹೇಳಿದ್ದು ಎಂದು ಹೇಳಿದರು. ಪ್ರಿಯಾಂಕ್ ಖರ್ಗೆ ಆರೋಪದ ಬಗ್ಗೆ ಬಿಜೆಪಿ ನಾಯಕರು ಚರ್ಚೆಗೆ ಅವಕಾಶ ಕೇಳಿದರು. ಆದರೆ ಚರ್ಚೆಗೆ ಅವಕಾಶ ನೀಡದ ಸ್ಪೀಕರ್ ವಿಜಯೇಂದ್ರ ಅವರಿಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದರು. ಇದನ್ನೂ ಓದಿ: ಹಾಸನ-ಮಂಗಳೂರು ಹೈವೇಯಲ್ಲಿ ಮತ್ತೊಂದು ಟೋಲ್ ಆರಂಭ – ಸಾರ್ವಜನಿಕರಿಂದ ತೀವ್ರ ಆಕ್ರೋಶ
ನನ್ನ ಮೇಲೆ ಪ್ರಿಯಾಂಕ್ ಖರ್ಗೆ ಗುರುತರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರ ದುರುಪಯೋಗ ಪಡಿಸಿಕೊಂಡಿದೆ. ಸಿಎಂಗೆ ಈಗ ಸಿಬಿಐ (CBI) ಮೇಲೆ ನಂಬಿಕೆ ಬಂದಿದೆ ಎಂದು ವಿಜಯೇಂದ್ರ ಹೇಳಿದಾಗ ಎದ್ದು ನಿಂತ ಕೃಷ್ಣಬೈರೇಗೌಡ ಇಲ್ಲಿ ರಾಜಕೀಯ ಭಾಷಣ ಮಾಡಬೇಡಿ ಎಂದು ಪ್ರತಿಕ್ರಿಯಿಸಿದರು.
ಈ ವೇಳೆ ಸಿಟ್ಟಾದ ವಿಜಯೇಂದ್ರ, ಸಿಎಂಗೆ ಪರಮಾಧಿಕಾರ ಇದ್ದು ಸಿಬಿಐ ತನಿಖೆಗೆ ನೀಡಲಿ. ಸಿಎಂ ಹಗರಣಗಳ ಸುಳಿಗೆ ಸಿಕ್ಕಿದ್ದಾರೆ. ಅದರಿಂದ ಬಚಾವಾಗಲು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಸಿಎಂ ಅವರಿಗೆ ಸಿಬಿಐ ಬಗ್ಗೆ ಬಹಳ ವಿಶ್ವಾಸ ಇದೆ. 150 ಕೋಟಿ ರೂ. ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ. ಜೊತೆಗೆ ಅನ್ವರ್ ಮಾಣಿಪ್ಪಾಡಿ ವರದಿಯ ತನಿಖೆಯನ್ನೂ ಸಿಬಿಐಗೆ ಕೊಡಲಿ ಎಂದು ಸವಾಲು ಎಸೆದರು. ಅಷ್ಟೇ ಅಲ್ಲದೇ ಮುಡಾ ಪ್ರಕರಣವನ್ನು ಸಿಬಿಐಗೆ ನೀಡಲಿ ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್ ನಾಯಕರು ಎದ್ದು ನಿಂತು ವಿರೋಧ ವ್ಯಕ್ತಪಡಿಸಿದಾಗ ಸದನದಲ್ಲಿ ಭಾರೀ ಕೋಲಾಹಲ, ಗದ್ದಲ ನಡೆಯಿತು.
150 ಕೋಟಿ ರೂ. ಆಮಿಷವನ್ನು ಸಿಬಿಐಗೆ ನೀಡಬೇಕೆಂದು ಕಾಂಗ್ರೆಸ್ನವರು ಕೂಗಿದರೆ ಬಿಜೆಪಿಯವರು ಮುಡಾ ಹಗರಣವನ್ನು ಸಿಬಿಐಗೆ ನೀಡಿ ಎಂದು ಆಗ್ರಹಿಸಿದರು. ಈ ಮಧ್ಯೆ ಮಾತಾಡಲು ಪ್ರಿಯಾಂಕ್ ಖರ್ಗೆ ಎದ್ದಾಗ ಖಾದರ್ ಅವಕಾಶ ನೀಡಲಿಲ್ಲ. ವಿಜಯೇಂದ್ರ ಅವರಿಂದ ಸ್ಪಷ್ಟನೆ ಬಂದಿದೆ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಿ ಎಂದು ಸೂಚಿಸಿ ಎರಡು ಪಕ್ಷಗಳ ಕಿತ್ತಾಟಕ್ಕೆ ಪೂರ್ಣ ವಿರಾಮ ಹಾಕಿದರು.