ಬೆಳಗಾವಿ: ಕುಂದಾನಗರಿಯ ಸುವರ್ಣ ಸೌಧದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಶಾವಿಗೆ ಒಣಹಾಕಿರುವ ಫೋಟೋ ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಹಪ್ಪಳ, ಸಂಡಿಗೆ, ಶಾವಿಗೆ ಒಣಗಿಸೋಕೆ ಸುವರ್ಣ ಸೌಧ ಬಳಕೆಯಾಗುತ್ತಿದೆಯೇ ಎಂದು ಅಸಮಾಧಾನವ್ಯಕ್ತವಾಗಿದೆ.
ಬೆಳಗಾವಿ ತಾಲೂಕಿನ ಹಲಗಾ ಮತ್ತು ಬಸ್ತವಾಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಲೆಂಬ ಕಾರಣಕ್ಕೆ 400ಕ್ಕೂ ಅಧಿಕ ಕೋಟಿ ರೂಪಾಯಿ ಖರ್ಚು ಮಾಡಿ ಸುವರ್ಣ ಸೌಧ ನಿರ್ಮಾಣ ಮಾಡಲಾಗಿದೆ. ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಅಂತಾ ಸುವರ್ಣ ಸೌಧವನ್ನು ಕಟ್ಟಲಾಗಿದೆ. ಆದರೆ ಇಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲಾಗಿ ಶಾವಿಗೆ, ಹಪ್ಪಳ, ಸಂಡಿಗೆ ಒಣಗಿಸೋಕೆ ಈ ಸುವರ್ಣ ಸೌಧ ಬಳಕೆಯಾಗುತ್ತಿದೆ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಹಿಂದೂಗಳ ಬಗ್ಗೆ ಅವಹೇಳನಕಾರಿ ಭಾಷಣ – ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸ್ ಅಧಿಕಾರಿಗಳು
ಈ ಕುರಿತಂತೆ ಬೆಳಗಾವಿಯ ನಾಗರಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಾಸ್ಪದ ರೀತಿಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಸರ್ಕಾರ ಮತ್ತು ಜಿಲ್ಲಾಡಳಿತಗಳ ದಿವ್ಯ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದೀಗ ಈ ಫೋಟೊಗಳು ಸಾಕಷ್ಟು ವೈರಲ್ ಆಗಿವೆ. ಇನ್ನೂ ಇದರ ನಿರ್ವಣೆಯ ಹೊಣೆ ಹೊತ್ತಿರುವ ಪಿಡಬ್ಲ್ಯೂಡಿ ಅಧಿಕಾರಿಗಳು ಸುವರ್ಣ ಸೌಧದ ಕಡೆಗೆ ತಿರುಗಿ ನೋಡಿಲ್ಲ. ಇನ್ನು ಈ ಕಟ್ಟಡದ ಭದ್ರತೆಯ ಜವಾಬ್ದಾರಿಯನ್ನು ಹೊತ್ತಿರುವ ಕೈಗಾರಿಕಾ ಭದ್ರತಾ ಪೊಲೀಸ್ ಸರಿಯಾಗಿ ಕರ್ತವ್ಯ ಮಾಡದ ಹಿನ್ನೆಲೆ ಈ ಅವಾಂತರಕ್ಕೆ ಕಾರಣವಾಗಿದೆ. ಒಟ್ಟಾರೆ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಸುವರ್ಣ ಸೌಧದ ಮುಂದೆ ಶಾವಿಗೆ ಹಾಕಿರೋದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.