ಬೆಳಗಾವಿ: ದೇಶದ ಗಡಿಯಲ್ಲಿ ಅಪರೇಷನ್ ಟೆರರ್ ಕಾರ್ಯಾಚರಣೆಯಲ್ಲಿ ಉಗ್ರರ ವಿರುದ್ಧ ಹೋರಾಡಿ ಬೆಳಗಾವಿ ಯೋಧಯೊಬ್ಬರು ವೀರಮರಣವನ್ನಪ್ಪಿದ್ದಾರೆ.
ಬೆಳಗಾವಿಯ ಉಚಗಾಂಗ ಮೂಲದ ಯೋಧ ರಾಹುಲ್ ಸುಳಗೇಕರ್ ಹುತಾತ್ಮರಾಗಿದ್ದಾರೆ. ಗಡಿಯಲ್ಲಿ ಒಂದೆಡೆ ಪಾಕಿಸ್ತಾನದ ಪ್ರಚೋದಿತ ಶೆಲ್ ದಾಳಿ, ಇನ್ನೊಂದೆಡೆ ಗಡಿಯಲ್ಲಿ ಉಗ್ರರ ನುಸುಳುವಿಕೆ ತಡೆ ಕಾರ್ಯಚರಣೆ ನಡೆಯುತ್ತಿತ್ತು. ಈ ಹಿನ್ನೆಲೆ ಕಳೆದ ರಾತ್ರಿ ಜಮ್ಮುವಿನ ಪೂಂಚ್ ವಲಯದಲ್ಲಿ ನಡೆದ ಅಪರೇಷನ್ ಟೆರರ್ ಕಾರ್ಯಾಚರಣೆಯಲ್ಲಿ ರಾಹುಲ್ ಅವರು ಭಾಗಿಯಾಗಿದ್ದರು.
ಈ ವೇಳೆ ಉಗ್ರರು ಹಾಗೂ ಭಾರತೀಯ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ದಾಳಿ ಪ್ರತಿದಾಳಿಯಲ್ಲಿ ಉಗ್ರರ ವಿರುದ್ಧ ಹೋರಾಡುವಾಗ ರಾಹುಲ್ ಅವರು ವೀರಮರಣವನ್ನಪ್ಪಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ರಾಹುಲ್ ಅವರು ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸುತ್ತಿದ್ದರು.
ನಾಳೆ ರಾಹುಲ್ ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ತರಲಾಗುತ್ತಿದ್ದು, ಸಕಲ ಸರ್ಕಾರಿ ಗೌರವ ಹಾಗೂ ಸೇನಾ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ ನೆರವೇರಲಿದೆ.