ಬೆಳಗಾವಿ: ಸಾರ್ವಜನಿಕ ಸ್ನೇಹಿ ಆಡಳಿತದ ದೃಷ್ಟಿಯಿಂದ ಪೊಲೀಸ್ ಇಲಾಖೆಯಲ್ಲಿನ ಮೂವರು ನಾನ್ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನಾಗಿ ಅಮರನಾಥ್ ರೆಡ್ಡಿ ಅವರನ್ನ ನೇಮಕ ಮಾಡಿದೆ. ಬೆಳಗಾವಿ ಹೆಚ್ಚುವರಿ ಪೊಲೀಸ್ ಅಧಿಕ್ಷಕ ರಾಮ್ ಎಲ್.ಅರಸಿದ್ದಿ ಅವರನ್ನು ವಿಜಯಪುರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧಿಕ್ಷಕರನ್ನಾಗಿ ನೇಮಿಸಿದೆ. ಅಮರನಾಥ್ ರೆಡ್ಡಿ ಅವರಿಂದ ತೆರವಾದ ಬೆಳಗಾವಿ ವಿಭಾಗದ ಭ್ರಷ್ಟಾಚಾರ ನಿಗ್ರಹ ದಳದ ಅಧೀಕ್ಷಕ ಹುದ್ದೆಗೆ ಹುಬ್ಬಳ್ಳಿ- ಧಾರವಾಡ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಕಳೆದ ಒಂದೂವರೆ ವರ್ಷ ಅವಧಿಗೂ ಹೆಚ್ಚು ಸಮಯ ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧಿಕ್ಷಕಾಗಿ ರಾಮ್ ಅರಸಿದ್ದಿ ಅವರು ಜನ ಸ್ನೇಹಿಯಾಗಿ ಸೇವೆ ಸಲ್ಲಿಸುವ ಮೂಲಕ ಜನ ಮನ್ನನೆ ಪಡೆದಿದ್ದಾರೆ. ಈ ಹಿಂದಿನ ಎಸ್ಪಿ ಸುಧೀರಕುಮಾರ ರೆಡ್ಡಿ ಹಾಗೂ ಸದ್ಯದ ಎಸ್ಪಿ ಲಕ್ಷ್ಮಣ್ ನಿಂಬರಗಿ ಅವರ ಅವಧಿಯಲ್ಲಿ ಅವರೊಂದಿಗೆ ಬೆರೆತು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದರು. ಎಸ್ಪಿ ಕಚೇರಿಗೆ ಜಿಲ್ಲೆಯ ದೂರದ ಗ್ರಾಮಗಳಿಂದ ಸಮಸ್ಯೆಗಳನ್ನು ಹೊತ್ತು ಬಂದಲ್ಲಿ ಪ್ರಾಮಾಣಿಕತೆಯಿಂದ ಸಮಸ್ಯೆಯನ್ನು ಪರಿಹರಿಸುವ ಕಾರ್ಯ ಮಾಡಿದ್ದಾರೆ.