ಬೆಳಗಾವಿ: ಮುಖ್ಯಮಂತ್ರಿಗೆ ಇರೋ ಪರಮಾಧಿಕಾರವನ್ನು ಯಾರೂ ಪ್ರಶ್ನೆ ಮಾಡೋಕೆ ಆಗಲ್ಲ. ಅವರಿಗಿರೋ ಅಧಿಕಾರ ಬಳಸಿ ಸಂಪುಟಕ್ಕೆ ಯಾರನ್ನು ಸೇರಿಸಬೇಕು ಮತ್ತು ಯಾರನ್ನು ಮುಂದುವರಿಸಬೇಕೆಂಬ ತೀರ್ಮಾನ ಮಾಡುತ್ತಾರೆ. ಅಥಣಿ ಶಾಸಕ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಕೈ ತಪ್ಪುವ ವಿಚಾರ ಎಲ್ಲವೂ ಊಹಾಪೋಹ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರ್ನಾಲ್ಕು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡೋದಾಗಿ ಈಗಾಗಲೇ ಸಿಎಂ ಬಿಎಸ್ವೈ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಫೆ.3 ಅಥವಾ ಫೆ.4 ರಂದು ಮಂತ್ರಿಮಂಡಲ ವಿಸ್ತರಣೆ ಆಗುತ್ತದೆ. ಆಗಲೇ ಈ ಬಗ್ಗೆ ಸ್ಪಷ್ಟನೆ ಸಿಗೋಕೆ ಸಾಧ್ಯ. ಸಿಎಂ ಪಕ್ಷದ ರಾಷ್ಟ್ರೀಯ ವರಿಷ್ಠರ ಜೊತೆ ಚರ್ಚೆ ಮಾಡಿದ್ದಾರೆ. ಅವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ಬಿಎಸ್ವೈ ಕೊಟ್ಟ ಮಾತು ತಪ್ಪಲ್ಲ, ನಾನು ಮಂತ್ರಿ ಆಗೇ ಆಗ್ತೀನಿ: ಕುಮಟಳ್ಳಿ
ಇದೇ ವೇಳೆ ವಿಧಾನ ಪರಿಷತ್ಗೆ ನಾಮಪತ್ರ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಕ್ಷದ ಸೂಚನೆ ಬಂದ ಮೇಲೆ ವಿಧಾನ ಪರಿಷತ್ಗೆ ನಾಮಿನೇಷನ್ ಸಲ್ಲಿಸುತ್ತೇನೆ. ಯಾರೂ ಸಹ ನನ್ನ ಸಂಪರ್ಕಿಸಿಲ್ಲ. ಭಾನುವಾರ ಧಾರವಾಡ ಪ್ರವಾಸದಲ್ಲಿದ್ದೇನೆ. ಫೆ.3 ರಂದು ಬೆಂಗಳೂರಿಗೆ ಹೋಗುತ್ತಿದ್ದೇನೆ. ಅಲ್ಲಿ ಹೋದ ಮೇಲೆ ಸಿಎಂ, ಪಕ್ಷದ ಅಧ್ಯಕ್ಷರ ಭೇಟಿಯಾಗುತ್ತೇನೆ. ಅವರೇನು ಸೂಚನೆ ಕೊಡುತ್ತಾರೆ. ಅದರ ಮೇಲೆ ನಿರ್ಣಯ ಕೈಗೊಳ್ಳುವೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನನ್ನು ಸೋಲಿಸಿದ್ದು ಬಿಜೆಪಿ, ನಾನ್ಯಾರ ಹಂಗಿನಲ್ಲೂ ಇಲ್ಲ: ಎಂಟಿಬಿ