ಬೆಂಗಳೂರು: ಕಾಂಗ್ರೆಸ್ನಲ್ಲಿ ಯಾವುದೇ ಒಳಜಗಳ ನಡೆದಿಲ್ಲ. ಎಲ್ಲವನ್ನು ಸರಿ ಮಾಡಲಾಗಿದೆ. ಚಿಕ್ಕ ವಿಷಯವನ್ನು ದೊಡ್ಡದ್ದು ಮಾಡಿದ್ದು ನೀವೇ ಎಂದು ವರದಿ ಬಿತ್ತರಿಸಿದ ಮಾಧ್ಯಮಗಳ ಮೇಲೆ ಸಚಿವ ಡಿಕೆ ಶಿವಕುಮಾರ್ ಆಕ್ರೋಶವನ್ನು ಹೊರಹಾಕಿದ್ದಾರೆ.
ಬೆಳಗಾವಿ ಕಾಂಗ್ರೆಸ್ ನಾಯಕರಾದ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ನಡೆದ ಹಣಾಹಣಿ ಸಂಧಾನದಲ್ಲಿ ಅಂತ್ಯವಾಗಿದೆ. ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ಲಕ್ಷ್ಮಿ ಹೆಬ್ಬಾಳ್ಕರ್ ಬಣಕ್ಕೆ ಮೇಲುಗೈ ಆಗಿದೆ. ಹೆಬ್ಬಾಳ್ಕರ್ ಬಣದ ಅಧ್ಯಕ್ಷರಾಗಿ ಮಹದೇವ್ ಪಾಟೀಲ್, ಉಪಾಧ್ಯಕ್ಷರಾಗಿ ಬಾಪೂಸಾಹೇಬ್ ಜಾಮದಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಎರಡು ಬಣಗಳ ನಡುವಿನ ಜಿದ್ದಾಜಿದ್ದಿನಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಹೆಸರು ತುಳುಕು ಹಾಕಿಕೊಂಡಿತ್ತು. ಡಿಕೆಶಿವಕುಮಾರ್ ಬೆಂಬಲದಿಂದಲೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಈ ರೀತಿ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಮೂರನೇ ವ್ಯಕ್ತಿ ಪ್ರವೇಶ ಮಾಡಬಾರದು ಎಂದು ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದರು.
ಪಕ್ಷದ ಹೈಕಮಾಂಡ್ ಹೇಳಿದ ಕೆಲಸವನ್ನು ನಾನು ಮಾಡುತ್ತೇನೆ. ಜಾರಕಿಹೊಳಿ ಸಹೋದರರು ನಮ್ಮ ಪಕ್ಷದ ಹಿರಿಯ ಮುಖಂಡರು. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ನನಗೆ ಯಾರ ಬಗ್ಗೆಯೂ ವೈಯಕ್ತಿಕ ಆಸಕ್ತಿ ಇಲ್ಲ. ಪಕ್ಷ ನನಗೆ ಸೂಚಿಸಿದ ಎಲ್ಲ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತೇನೆ. ನನಗೆ ಯಾರ ಮಧ್ಯೆಯ ಹಸ್ತಕ್ಷೇಪ ಮಾಡುವ ಅವಶ್ಯಕತೆ ಇಲ್ಲ. ನಮ್ಮ ನಾಯಕರು ತಮ್ಮ ಕಷ್ಟಕ್ಕೆ ಕರೆದರೂ ಹೋಗುತ್ತೇನೆ. ಅವರ ಕಷ್ಟಗಳನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದೇವೆ. ರಾಜ್ಯದ ಯಾವುದೇ ಜಿಲ್ಲೆಯ ನಾಯಕರು ಕರೆದ್ರೂ ನಾನು ಹೋಗುತ್ತೇನೆ. ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡುತ್ತೇನೆ ಎಂದು ಹೇಳುವ ಮೂಲಕ ಜಾರಕಿಹೊಳಿ ಸಹೋದರರಿಗೆ ಪರೋಕ್ಷವಾಗಿ ಜಲಸಂಪನ್ಮೂಲ ಸಚಿವ ಡಿಕೆಶಿ ತಿರುಗೇಟು ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv