ಚಿಕ್ಕೋಡಿ: ಬೆಳಗಾವಿ ಜಿಲ್ಲೆ ಹುಕ್ಕೇರಿಯ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗೆ ರಾಜ್ಯ ಮಟ್ಟದ ಎರಡು ಪ್ರಶಸ್ತಿಗಳು ಲಭಿಸಿವೆ.
ಆಸ್ಪತ್ರೆಯ ಇಬ್ಬರು ಶುಶ್ರೂಷಕಿಯರಿಗೆ ರಾಜ್ಯ ಆರೋಗ್ಯ ಇಲಾಖೆ ನೀಡುವ ಪ್ರತಿಷ್ಠಿತ ಪ್ಲೋರೆನ್ಸ್ ನೈಟಿಂಗೇಲ್ 2019ರ ಪ್ರಶಸ್ತಿ ಲಭಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವಿದ್ಯಾರ್ಥಿ ಜೀವನದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕಿಯರಿಗೆ ನೀಡುವ ಪ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ಹುಕ್ಕೇರಿಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀದೇವಿ ಶಿರೆಪ್ಪನವರ ಹಾಗೂ ಸರಿತಾ ಕೋರಿ ಪಡೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶ್ರೀದೇವಿ ಹಾಗೂ ಸರಿತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ಇಬ್ಬರು ಶುಶ್ರೂಷಕಿಯರನ್ನು ಹುಕ್ಕೇರಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಇಂದು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಆಸ್ಪತ್ರೆಯ ಮುಖ್ಯಾಧಿಕಾರಿ ಡಾ.ಸಂಜಯ ದೊಡಮನಿ ಹಾಗೂ ತಾಲೂಕಾ ಆರೋಗ್ಯಾಧಿಕಾರಿ ಉದಯ ಕುಡಚಿ ಮಾತನಾಡಿ, ಶ್ರೀದೇವಿ ಹಾಗೂ ಸರಿತಾ ಅವರಿಗೆ ಪ್ರಶಸ್ತಿ ಬಂದಿದ್ದು ನಮಗೂ ಹೆಮ್ಮೆ ತಂದಿದೆ. ಎಲ್ಲ ಸಿಬ್ಬಂದಿಯು ರೋಗಿಗಳ ಸೇವೆ ಸಲ್ಲಿಸಿ ಕೆಲಸದ ಮೇಲೆ ಶ್ರದ್ಧೆ, ರೋಗಿಗಳಿಗೆ ಪ್ರೀತಿ, ಧೈರ್ಯ ತುಂಬಲು ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ತಜ್ಞೆ ಪ್ರಗತಿ ಬೋರಗಾವಿ, ಡಾ.ದೀಪಕ ಅಂಬಲಿ, ಡಾ.ರಿಯಾಜ್ ಮಕಾನದಾರ, ವಿನೋದಕುಮಾರ, ಪ್ರಕಾಶ ಶಶಿಕುಮಾರ, ಸವಿತಾ ಪತ್ತಾರ ಸಂತೋಷ ಪಾಟೀಲ್ ಉಪಸ್ಥಿತರಿದ್ದರು.