ಬೆಂಗಳೂರು: ಬಿಜೆಪಿಯವರನ್ನು ಹರಾಮ್ಕೋರರು ಎಂದಿದ್ದ ಮಾಜಿ ಸಚಿವ, ಬೆಳಗಾವಿಯ ಹುಕ್ಕೇರಿಯ ಶಾಸಕ ಉಮೇಶ್ ಕತ್ತಿ ಉಲ್ಟಾ ಹೊಡೆದಿದ್ದು, ನಾನು ನನ್ನ ಆಪ್ತನಿಗೆ ಅಂದಿದ್ದು ಬಿಜೆಪಿ ಅವರಿಗೆ ಅಂದಿಲ್ಲ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಭೇಟಿ ಬಳಿಕ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುತ್ತಾ ಬಿಜೆಪಿಯವರು ಹರಾಮ್ಕೋರರು ಎಂದು ಹೇಳಿದ್ದರು.
ವಿವಾದ ಜೋರಾಗುತ್ತಿದ್ದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಉಮೇಶ್ ಕತ್ತಿ, ನಾನು ಬಿಜೆಪಿ ಅವರಿಗೆ ಹೇಳಿಲ್ಲ. ಜಗದೀಶ್ ಶೆಟ್ಟರ್ ಅವರು ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಹೋಗಬೇಡಿ ಎಂದು ಹೇಳಿದ್ದರು. ಲಿಂಗಾಯತ ವೀರಶೈವರನ್ನು ಒಡೆಯಲು ಎಂಬಿ ಪಾಟೀಲ್, ವಿನಯ್ ಕುಲಕರ್ಣಿ, ಬಸವರಾಜ ರಾಯರೆಡ್ಡಿ ಮುಂದಾಗಿದ್ದಾರೆ. ಆದರೆ ಇಗ ಬಸವರಾಜರಾಯರೆಡ್ಡಿ ಈ ವಿಚಾರದಿಂದ ಹಿಂದೆ ಸರಿದಿದ್ದಾರೆ. ನಾನು ವೀರಶೈವ ಲಿಂಗಾಯತನಾಗಿದ್ದು ನನ್ನ ಧರ್ಮ ಹಿಂದೂ. ಎಂ.ಬಿ.ಪಾಟೀಲ್ ನಡೆಸಿದ ಸಮಾವೇಶಕ್ಕೆ ಹೋದರೆ ಲಿಂಗಾಯತನಾಗಲ್ಲ. ನಾನು ಹುಟ್ಟಿದಾಗಿನಿಂದಲೇ ಲಿಂಗಾಯತ. ಲಿಂಗಾಯತನಾಗಿಯೇ ಸಾಯುತ್ತೇನೆ ಎಂದು ಹೇಳಿದರು.
ಇದೆ ವೇಳೆ ಬಿಜೆಪಿಯಿಂದ ನಿಮಗೆ ಟಿಕೆಟ್ ಸಿಗುತ್ತಾ ಎಂದು ಕೇಳಿದ್ದಕ್ಕೆ, ಇನ್ನೂ ನಿರ್ಧಾರವಾಗಿಲ್ಲ. ಖಂಡಿತವಾಗಿಯೂ ಬಿಜೆಪಿಯಿಂದ ನನಗೆ ಟಿಕೆಟ್ ಸಿಗುತ್ತದೆ ಎನ್ನುವ ವಿಶ್ವಾಸವಿದೆ ಎಂದರು. ಒಂದು ವೇಳೆ ಟಿಕೆಟ್ ಸಿಗದೇ ಇದ್ದಲ್ಲಿ ಎನ್ನುವ ಮರು ಪ್ರಶ್ನೆಗೆ, ನಾನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.
https://youtu.be/vdLowLrsQL0