– 17 ಜನ ಶಾಸಕರು ಹೋಟೆಲ್ ಸ್ನೇಹಿತರು
ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರ್ಣ ಹಾಗೂ ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವು ಇದ್ದಂತೆ ಎಂದು ಅನರ್ಹ ಶಾಸಕ ಮುನಿರತ್ನ ಹಾಡಿ ಹೊಗಳಿದ್ದಾರೆ.
ಗೋಕಾಕ್ ಕ್ಷೇತ್ರದ ಧೂಪದಾಳ ಗ್ರಾಮದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರು ಯಾರಿಗೂ ಕೆಟ್ಟದ್ದನ್ನು ಬಯಸಿದವರಲ್ಲ. ಅವರನ್ನು ಹತ್ತಿರದಿಂದ ನೋಡಲು ಆರಂಭಿಸಿದಾಗಿನಿಂದ ಅವರಲ್ಲಿರುವ ಮುಗ್ಧತೆ ಅರ್ಥವಾಯಿತು. ರಮೇಶ್ ಜಾರಕಿಹೊಳಿ ಅವರನ್ನು ನಾನು ಗೋವಿಗೆ ಹೋಲಿಸುತ್ತೇನೆ. ಗೋವು ಹಾಲು ಕೊಡುತ್ತದೆಯೇ ಹೊರತು, ವಿಷ ಕೊಡುವುದಿಲ್ಲ. ಕೆಲವರು ಹಾಲು ಕುಡಿದು ವಿಷ ಕೊಡುತ್ತಾರೆ. ಆದರೆ ರಮೇಶ್ ಜಾರಕಿಹೊಳಿ ಅಂತಹ ವ್ಯಕ್ತಿಯಲ್ಲ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಅವರು ಅತಿ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಸಚಿವರಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಾರೆ. ನಾವು 17 ಮಂದಿ ಶಾಸಕರು ಮುಂಬೈನ ಹೋಟೆಲ್ ಸ್ನೇಹಿತರು. ಈ ಲಿಸ್ಟ್ ನಲ್ಲಿ ಅನರ್ಹ ಶಾಸಕ ಆರ್.ಶಂಕರ್ ಅವರು ಕೂಡ ಇದ್ದಾರೆ. ಅವರು ಕೂಡ ಸಚಿವರಾಗುತ್ತಾರೆ ಎಂದು ತಿಳಿಸಿದರು.
ನೀವು ಕುರುಕ್ಷೇತ್ರ ಸಿನಿಮಾ ನೋಡಿದ್ದೀರಾ? ಎಷ್ಟು ಜನ ನೋಡಿದ್ದೀರಾ ಕೈ ಎತ್ತಿ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದರು. ಜನರು ಕೈ ಎತ್ತುತ್ತಿದ್ದಂತೆ ನಿಮ್ಮ ದುಡ್ಡು ನನಗೆ ಬಂದಿದೆ ಎಂದರು. ಬಳಿಕ ಮಾತು ಮುಂದುವರಿಸಿ, ಬಿ.ಎಸ್.ಯಡಿಯೂರಪ್ಪ ಅವರು ಕರ್ಣ ಇದ್ದಂತೆ. ಸಿಎಂ ಕೊಟ್ಟ ಮಾತನ್ನು ಹಿಂಪಡೆಯುವುದಿಲ್ಲ. ಅವರು ಕೊಟ್ಟ ಮಾತನ್ನು ಎಂತಹ ಸಂದರ್ಭದಲ್ಲಾದರೂ ಉಳಿಸಿಕೊಳ್ಳುತ್ತಾರೆ. ಅದೇ ಕಾರಣಕ್ಕೆ ಅವರನ್ನು ನಂಬಿ 17 ಜನ ಶಾಸಕರು ಬಿಜೆಪಿಗೆ ಸೇರಿದ್ವಿ ಎಂದರು.
17 ಜನ ಶಾಸಕರಲ್ಲಿ ಯಾರೂ ದಡ್ಡರಿಲ್ಲ. ಒಬ್ಬರಿಗಿಂತ ಒಬ್ಬರು ಮೇಧಾವಿಗಳಿದ್ದಾರೆ. ಸಿಎಂ ಯಡಿಯೂರಪ್ಪ ಅವರೊಂದಿಗೆ ಬಿಜೆಪಿ ಜೊತೆಗೆ ಕೈ ಜೋಡಿಸಿದ್ದೇನೆ ಎಂದು ಹೇಳಿದರು.