ಬೆಳಗಾವಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಆದರೆ ಈ ಲಾಕ್ ಡೌನ್ ನಿಂದ ಸುಮಾರು 50ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ಪರದಾಟ ಅನುಭವಿಸುತ್ತಿವೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಕೆಂಗಾನೂರು ಗ್ರಾಮದಲ್ಲಿ ಉತ್ತರಕನ್ನಡ ಜಿಲ್ಲೆಯ ಹಡಗಲಿ, ಡೊಂಗ್ರಿಕೊಪ್ಪ ಗ್ರಾಮದ 50ಕ್ಕೂ ಹೆಚ್ಚು ಕುಟುಂಬಗಳು ನರಕಯಾತನೆ ಅನುಭವಿಸುತ್ತಿವೆ. ಹಸುಗೂಸಿನೊಂದಿಗೆ ವಾಸವಿರುವ ಬಾಣಂತಿ, ಪುಟ್ಟ ಪುಟ್ಟ ಕಂದಮ್ಮಗಳ ಜೊತೆ ಇಲ್ಲಿ ಕುಟುಂಬಗಳು ವಾಸವಾಗಿವೆ.
ಇವರು ವರ್ಷದ 9 ತಿಂಗಳು ಊರೂರು ಸುತ್ತಿ ಮನೆ ಮನೆಗೆ ತೆರಳಿ ಅವರ ಕುಟುಂಬದ ಇತಿಹಾಸ ಹೇಳುವವರಾಗಿದ್ದಾರೆ. ಬೈಲಹೊಂಗಲ, ಗೋಕಾಕ್, ಬಾಗಲಕೋಟೆ ಹಾಗೂ ರಾಯಚೂರು ಸೇರಿ ವಿವಿಧೆಡೆ ತೆರಳುತ್ತಿದ್ದರು. ಆದರೆ ಇದೀಗ ಲಾಕಡೌನ್ನಿಂದ ಎಲ್ಲಿಯೂ ಹೋಗದೆ ಕುಟುಂಬ ಕೆಂಗಾನೂರಲ್ಲಿ ಸಿಲುಕಿದ್ದು, ಜಾಗ ಖಾಲಿ ಮಾಡಿ ಅಂತ ಪೊಲೀಸರು ಹೇಳುತ್ತಿದ್ದಾರೆ ಎಂದು ಅವರು ಆರೋಪ ಮಾಡುತ್ತಿದ್ದಾರೆ.
ಸದ್ಯ ಲಾಕ್ಡೌನ್ನಲ್ಲಿ ಸಿಲುಕಿರುವ ಕುಟುಂಬಗಳಿಗೆ ತಾಲೂಕು ಆಡಳಿತ ಪಡಿತರ ವ್ಯವಸ್ಥೆ ಕಲ್ಪಿಸಿದೆ. ಆದರೆ ಇತರೆ ಸಾಮಗ್ರಿ ವಿತರಿಸುವಂತೆ ಹೆಳವರ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ.