ಚಿಕ್ಕೋಡಿ(ಬೆಳಗಾವಿ): ನಾನಂತೂ ಬಿಜೆಪಿ ಪಕ್ಷ ಬಿಡುವುದಿಲ್ಲ. ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಹುಕ್ಕೇರಿ ಶಾಸಕ ಹಾಗೂ ಬಿಜೆಪಿ ಮುಖಂಡ ಉಮೇಶ್ ಕತ್ತಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಬಿಜೆಪಿ 32 ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ಇಬ್ರಾಹಿಂ ಅವರನ್ನೇ ಕೇಳಬೇಕು ಅವರೇ ಹೆಸರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತದೆ. ಪಕ್ಷ ನನ್ನ ಸಿಎಂ ಮಾಡಿದರೆ ನಿಭಾಯಿಸುವ ಶಕ್ತಿ ನನ್ನಲ್ಲಿ ಇದೆ. ಇಂದೇ ಸಿಎಂ ಮಾಡಲಿ ಮುಂದೆ ಮಾಡಲಿ ಚಾರ್ಜ್ ತೆಗೆದುಕೊಳ್ಳಲು ನಾನು ಸಿದ್ಧ ಎಂದು ಮತ್ತೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದರು. ಅಲ್ಲದೆ ಮುಂದಿನ ಸಂಪುಟ ವಿಸ್ತರಣೆಯಲ್ಲಿ ನನ್ನನ್ನು ಪರಿಗಣನೆ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ. ಮಂತ್ರಿ ಮಾಡಿದರೆ ಮಂತ್ರಿಯಾಗುತ್ತೇನೆ ಇಲ್ಲವಾದಲ್ಲಿ ಶಾಸಕನಾಗಿ ಮುಂದುವರೆಯುತ್ತೇನೆ ಎಂದರು.
ಇದೇ ವೇಳೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರ ವಾಗಿ ಮಾತನಾಡಿದ ಅವರು, ಸಹೋದರ ರಮೇಶ್ ಕತ್ತಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಜಾರಕಿಹೊಳಿ ಸಹೋದರರು ಹಾಗೂ ಡಿಸಿಎಂ ಸವದಿ ಅವರ ಬೆಂಬಲ ಹಾಗೂ ಸಹಕಾರ ನೀಡಲು ವಿನಂತಿಸುತ್ತೇನೆ. ಈ ಬಾರಿ ಡಿಸಿಸಿ ಚುನಾವಣೆಯಲ್ಲಿ ನಮ್ಮ ಪೆನಲಿನ್ 16 ಜನ ಆಯ್ಕೆಯಾಗುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಉಮೇಶ್ ಕತ್ತಿ ತಿಳಿಸಿದರು.