ಚಿಕ್ಕೋಡಿ(ಬೆಳಗಾವಿ): ಮನೆ ಕಟ್ಟಿಕೊಡಲಿಲ್ಲ ಅಂದರೆ ಈ ಸರ್ಕಾರವನ್ನೇ ಕೆಡವಿ ಬಿಡುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.
ಅರಭಾವಿ ಮತಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಪ್ರವಾಸ ಮಾಡಿದ ಶಾಸಕರು, ನಿಮಗೆ ಮನೆ ಕಟ್ಟಿಸಿಕೊಡುವ ಜವಾಬ್ದಾರಿ ನಮ್ಮದು. ಒಂದು ವೇಳೆ ಸರ್ಕಾರ ಮನೆ ಕಟ್ಟಿಕೊಡಲಿಲ್ಲ ಅಂದರೆ ಸರ್ಕಾರವನ್ನೇ ಕೆಡವುತ್ತೇನೆ ಎಂದು ಹೇಳುವ ಮೂಲಕ ತಮ್ಮ ಮತಕ್ಷೇತ್ರದ ಸಂತ್ರಸ್ತರಿಗೆ ಬಾಲಚಂದ್ರ ಅವರು ಅಭಯ ನೀಡಿದ್ದಾರೆ.
ಇತ್ತ ಸತತ 12 ದಿನಗಳ ಕಾಲ ಜೀವ ರಕ್ಷಿಸಿದ ಸೈನಿಕರಿಗೆ ರಾಖಿ ಕಟ್ಟಿ ಅವರನ್ನು ಇಂದು ಹೆಮ್ಮೆಯಿಂದ ಕಳುಹಿಸಿ ಕೊಡಲಾಯಿತು. ಚಿಕ್ಕೋಡಿಯ ಲೋಕೊಪಯೋಗಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 85 ಜನ ವೀರಜವಾನರಿಗೆ ಮಹಿಳೆಯರು ರಾಖಿ ಕಟ್ಟಿ ಬೀಳ್ಕೊಟ್ಟಿದ್ದಾರೆ. ಈ ವೇಳೆ ಮಹಿಳೆಯರಿಗೆ ಸೈನಿಕರು ಉಡುಗೋರೆಯಾಗಿ ಸೀರೆಗಳನ್ನು ನೀಡಿದ್ದಾರೆ. ಸುಮಾರು 5 ಸಾವಿರಕ್ಕೂ ಹೆಚ್ಚು ಜೀವಗಳನ್ನು ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ್ದರು.
ಬೆಳಗಾವಿ ಜಿಲ್ಲೆ ಕೃಷ್ಣಾ ನದಿ ಪ್ರವಾಹಕ್ಕೆ ನಲುಗಿ ಹೋಗಿದೆ. ಜಿಲ್ಲೆಯ ಅನೇಕ ಗ್ರಾಮಗಳು ಜಲಾವೃತವಾಗಿದ್ದು ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹದಲ್ಲಿ ಜನರು ತಮ್ಮ ಮನೆ ಮಠಗಳನ್ನು ಕಳೆದುಕೊಂಡಿದ್ದು, ಮಾತ್ರವಲ್ಲದೇ ಅವರ ಬದುಕೂ ನೀರಿನಲ್ಲಿ ಕೊಚ್ಚಿ ಹೋಗಿದೆ.