ಬೆಳಗಾವಿ: ಇದು ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮಿಸ್ಸಿಂಗ್ ಕಹಾನಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಇಬ್ಬರೂ ಕಾಣೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಸಂಕೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಗರ್ ಪಾಟೀಲ ಹಾಗೂ ಮಹಿಳಾ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಬಾಳಾಬಾಯಿ ಕುರಾಡೆ ಇಬ್ಬರೂ ಕಳೆದ 15 ದಿನಗಳಿಂದ ಕಾಣೆಯಾಗಿದ್ದಾರೆ.
ಸಾಗರ್ ಪಾಟೀಲ್ ಮತ್ತು ಪತ್ನಿ ಕಾಣೆಯಾಗಿರುವ ಬಗ್ಗೆ ಬಾಳಾಬಾಯಿ ಪತಿ ಬಾಳಾಸಾಹೇಬ್ ದೂರು ನೀಡಿದ್ದಾರೆ. ಎರಡೂ ಕುಟುಂಬಗಳು ಹಲವು ವರ್ಷಗಳಿಂದ ಪರಿಚಿತರಾಗಿದ್ದು ಇಬ್ಬರ ನಡುವೆ ಒಡನಾಟ ಹೆಚ್ಚಾಗಿಯೇ ಇತ್ತು. ಇವರಿಬ್ಬರೂ ನಮ್ಮ ಕುಟುಂಬಕ್ಕೆ ವಿಶ್ವಾಸ ದ್ರೋಹ ಎಸಗಿದ್ದಾರೆ ಅಂತ ಅಳಲು ತೋಡಿಕೊಳ್ತಾರೆ ಬಾಳಾಬಾಯಿ ಪತಿ.
ನನ್ನ ಹೆಂಡತಿ ಬಾಳಾಬಾಯಿ ಮಹಿಳಾ ಬ್ಲಾಕ್ ಕಾಂಗ್ರೆಸ್ನ ಉಪಾಧ್ಯಕ್ಷೆ. ಸಾಗರ್ ಪಾಟೀಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾನೆ. ನನ್ನ ಹೆಂಡತಿ ಮೇ 12 ರಂದು ಮುಂಬೈಯಿಂದ ಬರುವಾಗ ಪುಣೆಯಲ್ಲಿ ಕಾಣೆಯಾಗಿದ್ದಾಳೆ. ಆದರೆ ಇದರ ಹಿಂದೆ ಸಾಗರ ಪಾಟೀಲ್ ಕೈವಾಡ ಇದೆ ಎಂದು ಮಾಹಿತಿ ಸಿಕ್ಕಿತು. ಅವನೇ ಮಾಡಿದ್ದು. ಯಾಕೆಂದರೆ ಹಲವಾರು ದಿನಗಳಿಂದ ಇವರಿಬ್ಬರು ಮೀಟಿಂಗ್ ಹೆಸರು ಹೇಳಿ ಸುತ್ತಾಡುತ್ತಿದ್ದರು. ಹೀಗಾಗಿ ಅವನೇ ಮಾಡಿದ್ದು. ಇದರಿಂದ ನಮ್ಮ ಕುಟುಂಬಕ್ಕೆ ಸಾಕಷ್ಟು ಮನಸ್ತಾಪ ಆಗಿದೆ ಅಂತ ಬಾಳಾಸಾಹೇಬ್ ತಿಳಿಸಿದ್ದಾರೆ.
ಸಾಗರ ಪಾಟೀಲ್ ಮೇಲೆ ಸಾಕಷ್ಟು ವಿಶ್ವಾಸವಿತ್ತು. ಕಳೆದ 10 ವರ್ಷದಿಂದ ನಮ್ಮ ಮತ್ತು ಅವರ ಸಂಬಂಧ ಬಹಳಷ್ಟು ಚೆನ್ನಾಗಿತ್ತು. ಆದರೆ ಅವನು ನಮಗೆ ವಿಶ್ವಾಸಾಘಾತ ಮಾಡಿದ್ದಾನೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದೇನೆ. ನನ್ನ ಹೆಂಡತಿ ಕಾಣೆಯಾಗಿದ್ದಾಳೆ. ಇಬ್ಬರದ್ದೂ ಫೋನ್ ಸ್ವಿಚ್ ಆಫ್ ಆಗಿದೆ. ಪೊಲೀಸರು ಹುಡುಕಿ ಕೊಡ್ತೀವಿ ಎಂದಿದ್ದಾರೆ ಅಂತ ಪತ್ನಿ ಕಾಣೆಯಾಗಿರುವ ಬಗ್ಗೆ ಬಾಳಾಸಾಹೇಬ್ ಅಳಲು ತೋಡಿಕೊಂಡಿದ್ದಾರೆ.
ಸಾಗರ್ ಪಾಟೀಲ್ ಚಿಕ್ಕೋಡಿ ಭಾಗದಲ್ಲಿ ದೊಡ್ಡ ಜಮಿನ್ದಾರ ವಂಶದವರು. ಎಸ್ಎಸ್ಎಲ್ಸಿ ಓದುತ್ತಿರುವ ಮಗಳಿದ್ದಾಳೆ. ಬಾಳಾಬಾಯಿಗೆ ಇಬ್ಬರು ಮಕ್ಕಳಿದ್ದು ಓರ್ವ ದ್ವಿತೀಯ ಪಿಯುಸಿಯಲ್ಲಿ, ಮತ್ತೋರ್ವ 9ನೇ ತರಗತಿಯಲ್ಲಿ ಓದುತ್ತಿದ್ದಾನೆ.