ಪಟ್ನಾ: ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರಸಾದ್ ಮತ್ತು ಐಶ್ವರ್ಯ ಅವರನ್ನು ಶಿವ, ಪಾರ್ವತಿಗೆ ಹೋಲಿಸಿ ಬ್ಯಾನರ್ ಹಾಕಿದ್ದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಪಾಟ್ನಾದಲ್ಲಿ ಶನಿವಾರ ಇವರಿಬ್ಬರ ಮದುವೆ ನಡೆದಿದೆ. ಮದುವೆಯಾಗುತ್ತಿರುವ ಹಿನ್ನಲೆಯಲ್ಲಿ ಲಾಲೂ ನಿವಾಸದ ಮುಂಭಾಗ ಬ್ಯಾನರ್ ಹಾಕಿದ್ದು, ಈ ಬ್ಯಾನರ್ ನಲ್ಲಿ ತೇಜ್ ಪ್ರಸಾದ್ ಮತ್ತು ಐಶ್ವರ್ಯಾ ಅವರನ್ನು ಶಿವ ಪಾರ್ವತಿಗೆ ಹೋಲಿಸಿ ಫೋಟೋ ಪ್ರಕಟಿಸಲಾಗಿತ್ತು.
ಮದುವೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ನಗರದ ವಿವಿಧೆಡೆ ಬ್ಯಾನರ್ ಹಾಕಲಾಗಿತ್ತು. ಅದರಲ್ಲೂ ತೇಜ್ ಪ್ರತಾಪ್ ಹಾಗೂ ಐಶ್ವರ್ಯ ಅವರನ್ನು ಶಿವ-ಪಾರ್ವತಿ ರೂಪದಲ್ಲಿ ಬಿಂಬಿಸಲಾಗಿತ್ತು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋದ ಬಗ್ಗೆ ಚರ್ಚೆ ನಡೆಯುತ್ತಿದ್ದು, ದೇವರಂತೆ ಚಿತ್ರಿಸಿರುವುದು ಸರಿಯಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
ವಧು ಐಶ್ವರ್ಯ ರೈ ತಂದೆ ಚಂದ್ರಿಕಾ ಪ್ರಸಾದ್ ಮಾಜಿ ಸಚಿವರಾಗಿದ್ದು, ಈಗ ಈ ಮದುವೆಯ ಮೂಲಕ ರಾಜಕಾರಣಿಗಳಿಬ್ಬರು ಸಂಬಂಧಿಗಳಾಗಿದ್ದಾರೆ. ಮೇವು ಹಗರಣದಲ್ಲಿ ದೋಷಿಯಾಗಿರುವ ಲಾಲೂ ಪ್ರಸಾದ್ ಯಾದವ್ ಪ್ರಸ್ತುತ ಬಿರ್ಸಾಮುಂಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು ಸದ್ಯ ಮಗನ ಮದುವೆಯಲ್ಲಿ ಭಾಗವಹಿಸಲು ಕೋರ್ಟ್ ಮೂರು ದಿನಗಳ ಪೆರೋಲ್ ಮಂಜೂರು ಮಾಡಿದೆ. ಇದರ ಜೊತೆಯಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ಜಾರ್ಖಂಡ್ ಹೈಕೋರ್ಟ್ 6 ವಾರಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.