ಜೈಪುರ: ತನ್ನ ಪುಟ್ಟ ಕಂದಮ್ಮನ ನೋಡಿ, ಮುದ್ದಾಡುವ ಮುನ್ನವೇ ಉಗ್ರರ ಆತ್ಮಾಹುತಿ ದಾಳಿಗೆ ಸಿಆರ್ಪಿಎಫ್ ಯೋಧ ರೋಹಿತಾಷ್ ಲಾಂಭಾ ಪುಲ್ವಾಮದಲ್ಲಿ ಹುತಾತ್ಮರಾಗಿದ್ದು, ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
ಗುರುವಾರದಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪುರದಲ್ಲಿ ನಡೆದ ಭೀಕರ ಉಗ್ರರ ಆತ್ಮಾಹುತಿ ದಾಳಿಗೆ 44 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ದೇಶಕ್ಕಾಗಿ ಮಣಿದ ವೀರ ಯೋಧರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ದಾಳಿಯಲ್ಲಿ ಜೈಪುರದ ಗೋವಿಂದ್ಪುರದ ಯೋಧ ರೋಹಿತಾಷ್ ಲಾಂಭಾ(27) ಕೂಡ ಹುತಾತ್ಮರಾಗಿದ್ದಾರೆ.
ಗೋವಿಂದ್ಪುರದ ಅಮರ್ಸಾರ್ ಗ್ರಾಮದ ನಿವಾಸಿಯಾಗಿರುವ ರೋಹಿತಾಷ್ ಲಾಂಭಾ ತಮ್ಮ 25ನೇ ವಯಸ್ಸಿನಲ್ಲಿಯೇ ಸಿಆರ್ಪಿಎಫ್ ಅನ್ನು ಸೇರಿದ್ದರು. ಅಲ್ಲದೇ ಕಳೆದ ವರ್ಷ ಅವರ ವಿವಾಹ ನಡೆದಿತ್ತು. 2018ರ ಡಿಸೆಂಬರ್ ತಿಂಗಳಲ್ಲಿ ಅವರಿಗೆ ಮುದ್ದಾದ ಹೆಣ್ಣು ಮಗುವೊಂದು ಜನಿಸಿತ್ತು.
ಕರ್ತವ್ಯದಲ್ಲಿದ್ದ ಕಾರಣ ರೋಹಿತಾಷ್ ಅವರು ತಮ್ಮ ಮಗಳನ್ನು ನೋಡಲು ಬರಲು ಆಗಿರಲಿಲ್ಲ. ಆದ್ರೆ ಮಗಳ ಮುದ್ದು ಮೊಗವನ್ನು ನೋಡುವ ಮುನ್ನವೇ ರೋಹಿತಾಷ್ ಹುತಾತ್ಮರಾಗಿದ್ದಾರೆ. ರೋಹಿತಾಷ್ ಅವರ ಅಗಲಿಕೆಯಿಂದ ಗ್ರಾಮದೆಲ್ಲೆಡೆ ಸ್ಮಶಾನ ಮೌನ ಆವರಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv