ಮಂಗಳೂರು: ವಿವಾದದ ಕೇಂದ್ರ ಬಿಂದುವಾಗಿದ್ದ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ (Mangaluru Central Market) ಮತ್ತೆ ವಿವಾದದಿಂದ ಸುದ್ದಿಯಾಗಿದೆ. ನೂತನವಾಗಿ ನಿರ್ಮಾಣ ಆಗುತ್ತಿರುವ ಮಾರುಕಟ್ಟೆಯಲ್ಲಿ ಅಧಿಕೃತ ಬೀಫ್ ಸ್ಟಾಲ್ಗೆ (Beef Stall) ಪಾಲಿಕೆ ಅವಕಾಶ ನೀಡಿದೆ. ಬಿಜೆಪಿ (BJP) ಆಡಳಿತ ಇರುವ ಪಾಲಿಕೆಯೇ ಈ ನಿರ್ಧಾರ ಮಾಡಿರುವುದು ಹಿಂದೂ ಸಂಘಟನೆಗಳ (Hindu Organization) ಕೆಂಗಣ್ಣಿಗೆ ಗುರಿಯಾಗಿದೆ.
ಬ್ರಿಟಿಷರ ಕಾಲದಿಂದ ಇದ್ದ ಈ ಮಾರುಕಟ್ಟೆಯನ್ನು ನವೀಕರಣಗೊಳಿಸಲು ಕಳೆದ ವರ್ಷ ನೆಲಸಮಗೊಳಿಸಲಾಗಿತ್ತು. ಆಗಲೇ ಮಾರ್ಕೆಟ್ನಲ್ಲಿದ್ದ ಎಲ್ಲಾ ಅಂಗಡಿಯವರು ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಇದೀಗ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 114 ಕೋಟಿ ರೂ. ವೆಚ್ಚದಲ್ಲಿ ಹೊಸ ಮಾರ್ಕೆಟ್ನ ಕಾಮಗಾರಿ ಆರಂಭಿಸಿದೆ. ಅದರ ನೀಲನಕ್ಷೆಯನ್ನು (Blueprint) ರೆಡಿ ಮಾಡಿದ್ದು ಅದರಲ್ಲಿರುವ ಮಾಹಿತಿ ಇದೀಗ ವಿವಾದವನ್ನು ಸೃಷ್ಟಿಸಿದೆ.
ಹೊಸ ಮಾರ್ಕೆಟ್ನಲ್ಲಿ ಬರೋಬ್ಬರಿ 9 ಬೀಫ್ ಸ್ಟಾಲ್ಗಳು ಬರುತ್ತದೆ ಎಂದು ನೀಲನಕ್ಷೆಯಲ್ಲಿ ನಮೂದಿಸಿರುವುದು ಇದೀಗ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಜಿಲ್ಲೆಯಲ್ಲಿ ಸಾಕಷ್ಟು ಗೋಕಳ್ಳತನ, ಗೋಹತ್ಯೆ, ಅಕ್ರಮ ಕಸಾಯಿಖಾನೆಗಳು ಮಿತಿ ಮೀರಿ ನಡೆಯುತ್ತಿದೆ. ಅದಕ್ಕೆ ಬೆಂಬಲವೆಂಬಂತೆ ಇದೀಗ ಪಾಲಿಕೆಯೇ ಬೀಫ್ ಸ್ಟಾಲ್ನ ಪ್ರಸ್ತಾವನೆ ಸಲ್ಲಿಸಿದ್ದು ಸರಿಯಲ್ಲ. ತಕ್ಷಣ ಇದನ್ನು ರದ್ದು ಮಾಡಬೇಕು. ಒಂದು ವೇಳೆ ಮುಂದುವರಿಸಿದರೆ ಅದರ ವಿರುದ್ಧದ ತೀವ್ರವಾದ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೇಳಿದ್ದ ಬೆನ್ನಲ್ಲೇ ಇದೀಗ ಕನಕದಾಸ ಜಯಂತಿಗೂ ಮನವಿ
ಮಾರ್ಕೆಟ್ನ ನೀಲನಕ್ಷೆಯಲ್ಲಿ ಕೋಳಿ, ಮೀನು, ಕುರಿಮಾಂಸದ ಸ್ಟಾಲ್ಗಳ ಜೊತೆಗೇ 9 ಬೀಫ್ ಸ್ಟಾಲ್ನ ಬಗ್ಗೆಯೂ ನಮೂದಿಸಲಾಗಿದೆ. ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇದ್ದರೂ, ಸ್ಥಳೀಯ ಶಾಸಕರು ಬಿಜೆಪಿಯವರೇ ಆಗಿದ್ದರೂ, ಗೋ ಹತ್ಯೆ ನಿಷೇಧದ ಬಗ್ಗೆ ಸಾಕಷ್ಟು ಮಾತನಾಡುವ ಬಿಜೆಪಿಗರೇ ಈ ರೀತಿ ಮಾಡಿರುವುದು ಯಾಕೆ ಎನ್ನುವುದು ಹಿಂದೂ ಸಂಘಟನೆಗಳ ಆಕ್ರೋಶದ ಮಾತು. ಈ ನಿರ್ಧಾರದಿಂದ ಹಿಂದೆ ಸರಿದು ಬೀಫ್ ಸ್ಟಾಲ್ ಅನ್ನು ಕೈ ಬಿಡಬೇಕೆಂದು ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ಗೆ ವಿಹೆಚ್ಪಿ – ಬಜರಂಗದಳ ಮನವಿ ಮಾಡಿದೆ. ಬೀಫ್ ಸ್ಟಾಲ್ ಅನ್ನು ಕೈಬಿಡುತ್ತಾರೆ ಎನ್ನುವ ನಂಬಿಕೆ ಇದೆ. ಒಂದು ವೇಳೆ ಕೈಬಿಡದೇ ಹೋದರೆ ಉಗ್ರ ಹೋರಾಟದ ಚಿಂತನೆ ನಡೆಸಲು ಹಿಂದೂ ಸಂಘಟನೆಗಳು ತೀರ್ಮಾನಿಸಿದೆ. ಬಿಜೆಪಿ ಆಡಳಿತ ಇರುವ ಪಾಲಿಕೆ ಈ ಬೀಫ್ ಸ್ಟಾಲ್ನ ನಿರ್ಧಾರ ಮಾಡಿರುವುದು ಯಾಕೆ ಎನ್ನುವುದೇ ಕುತೂಹಲ. ಇದನ್ನೂ ಓದಿ: ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ : ಶ್ರೀರಾಮಸೇನೆ