ಮೈಸೂರು: ಜಿಲ್ಲೆಯ ಕಲಾಮಂದಿರದ ಮನೆಯಂಗಳ ಸಭಾಂಗಣದಲ್ಲಿ ನಡೆದ ಆಹಾರದ ಹಕ್ಕು ವ್ಯಕ್ತಿ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ಗೋಮಾಂಸ ತಿಂದು ಕಾರ್ಯಕ್ರಮ ಉದ್ಘಾಟನೆ ಮಾಡಿದ ಘಟನೆ ನಡೆದಿದ್ದು, ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಮನೆಯಂಗಳ ಸಭಾಂಗಣದಲ್ಲಿ ವಿಚಾರವಾದಿ ಕೆ.ಎಸ್. ಭಗವಾನ್, ಮೈಸೂರು ವಿ.ವಿ. ಪ್ರೊ. ಮಹೇಶಚಂದ್ರ ಗುರು, ಕಾಂಗ್ರೆಸ್ ಮಾಜಿ ಮೇಯರ್ ಪುರುಷೋತ್ತಮ್ ಸೇರಿದಂತೆ ಹಲವು ಗಣ್ಯರು ಗೋ ಮಾಂಸ ಸೇವಿಸಿ ಬಳಿಕ ವಿಚಾರ ಸಂಕಿರಣ ಉದ್ಘಾಟನೆ ಮಾಡಿದ್ದಾರೆ. ಅಲ್ಲದೇ ಕಾರ್ಯಕ್ರಮಕ್ಕೆ ಬಂದಿದ್ದ ಸಭಿಕರಿಗೂ ಗೋ ಮಾಂಸ ವಿತರಣೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಅನುಮತಿ ಇಲ್ಲದೆ ಗೋಮಾಂಸ ಸೇವನೆ ಮಾಡಿದ್ದಕ್ಕೆ ಕಾರ್ಯಕ್ರಮದ ಆಯೋಜಕರು ಹಾಗೂ ಸಭಾಂಗಣ ಉಸ್ತುವಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು. ಸರ್ಕಾರದ ಯಾವುದೇ ಸಭಾಂಗಣದಲ್ಲಿ ಮಾಂಸಹಾರ ಸೇವನೆ ಅಥವಾ ಬಡಿಸುವಂತಿಲ್ಲ. ಆದ್ರೆ ಕಲಾಮಂದಿರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ಕಟ್ಟಡದಲ್ಲಿ ಕಾನೂನು ಉಲ್ಲಂಘಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲಾಗುವುದು ಅಂತಾ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ದೂರವಾಣಿ ಮೂಲಕ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಮನೆಯಂಗಳ ಸಭಾಂಗಣದ ಸಹಾಯಕ ನಿರ್ದೇಶಕ ಚನ್ನಪ್ಪ ಪ್ರತಿಕ್ರಿಯಿಸಿದ್ದು, ಚಾರ್ವಿಕ ಸಂಸ್ಥೆಯವರು ಆನ್ಲೈನ್ ಮೂಲಕ ಸಭಾಂಗಣವನ್ನ ಬುಕ್ ಮಾಡಿದ್ದರು. 3 ದಿನಗಳ ಕಾಲ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆದಿದ್ದರು. ಕೊನೆ ದಿನದ ಕಾರ್ಯಕ್ರಮದಲ್ಲಿ ಗೋಮಾಂಸ ಸೇವನೆ ಮಾಡಿದ್ದಾರೆ. ಅವರು ಗೋ ಮಾಂಸ ತಿಂದಿರುವುದು ತಪ್ಪು. ಮಾಂಸ ತಿನ್ನುವುದಕ್ಕೆ ನಾವು ಅನುಮತಿ ಕೊಟ್ಟಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಕಾರ್ಯಕ್ರಮ ಆಯೋಜನೆ ಮಾಡಿದ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲಗುವುದು. ಆ ಸಂಸ್ಥೆಯನ್ನ ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಿ, ಮುಂದೆ ಕಾರ್ಯಕ್ರಮ ನಡೆಸದಂತೆ ಕ್ರಮ ಕೈಗೊಳ್ಳುತ್ತೇವೆ ಅಂತಾ ಸ್ಪಷ್ಟನೆ ನೀಡಿದ್ದಾರೆ.
ಘಟನೆ ಸಂಬಂಧ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಸಭಾಂಗಣಕ್ಕೆ ಗಂಜಲ ಸಿಂಪಡಿಸಿ ಸ್ಥಳ ಸ್ವಚ್ಛಗೊಳಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಕಲಾಮಂದಿರ ಹಾಗೂ ಮನೆಯಂಗಳದ ಮುಂಭಾಗ ಪ್ರತಿಭಟನೆ ನಡೆಸಿದ ಯುವ ಮೋರ್ಚಾ ಕಾರ್ಯಕರ್ತರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೇ ಸಭಾಂಗಣದ ಸಹಾಯಕ ನಿರ್ದೇಶಕ ಚೆನ್ನಪ್ಪ ಜೊತೆ ವಾಗ್ವಾದ ನಡೆಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ.
https://www.youtube.com/watch?v=wsp2gXsXGoo