ದಾವಣಗೆರೆ: ಸ್ಮಾರ್ಟ್ ಸಿಟಿಗೆ ನಗರ ಆಯ್ಕೆಯಾದಾಗ ದಾವಣೆಗೆರೆಯ ಜನ ಹೆಮ್ಮೆಪಟ್ಟುಕೊಂಡಿದ್ದರು. ಆದರೆ ಈಗ ನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ರೋಗ ಬಂದಿದ್ದು, ದೂರದ ಊರಿನಿಂದ ಬರುವ ರೋಗಿಳನ್ನ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾಸ್ಪತ್ರೆಯ ಕೆಲ ವಾರ್ಡ್ಗಳಲ್ಲಿ ಬೆಡ್ ಗಳು ಖಾಲಿ ಇದ್ದರೂ ಕೂಡ ಮಹಿಳೆಯರನ್ನ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಕೆಲವು ವಾರ್ಡ್ ಗಳಲ್ಲಿ ಮಂಚದ ಕಾಲುಗಳಿಗೆ ಇಟ್ಟಿಗೆಗಳನ್ನು ಇಡಲಾಗಿದೆ.
ಮಕ್ಕಳು, ಮಹಿಳೆಯರು, ವಿಕಲಚೇತನರು, ವೃದ್ಧರು ಹೀಗೆ ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳನ್ನ ನೆಲದ ಮೇಲೆ ಮಲಗಿಸಲಾಗುತ್ತಿದೆ. ರೋಗಿಗಳು ಈ ಬಗ್ಗೆ ಜಿಲ್ಲಾಸ್ಪತ್ರೆ ಅಧೀಕ್ಷಕಿ ನೀಲಾಂಬಿಕೆ ಅವರನ್ನು ಪ್ರಶ್ನೆಮಾಡಿದರೆ, ನಾನೇನು ಮಾಡಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಯಾರಾದರೂ ಡಿಸ್ಚಾರ್ಜ್ ಆದರೆ ನಿಮಗೆ ಬೆಡ್ ನೀಡುತ್ತೇವೆ ಎಂದು ಹಾರಿಕೆಯ ಉತ್ತರವನ್ನು ನೀಡಿದ್ದಾರೆ.
ಕೆಲ ವಾರ್ಡ್ ಗಳಲ್ಲಿ 2, 3 ರೂಮ್ ಗಳಿದ್ದು, ಸಾಕಷ್ಟು ಬೆಡ್ ಗಳು ಖಾಲಿ ಇವೆ. ಆದರೂ ಕೂಡ ರೋಗಿಗಳಿಗೆ ಆಸ್ಪತ್ರೆಯ ಸಿಬ್ಬಂದಿ ಈ ರೀತಿ ಹಿಂಸೆ ನೀಡುತ್ತಿದ್ದಾರೆ ಎಂದು ರೋಗಿಗಳ ಸಂಬಂಧಿಗಳು ಆರೋಪಿಸಿದ್ದಾರೆ.
ಆಸ್ಪತ್ರೆ ಅಧೀಕ್ಷಕರಾಗಲಿ, ಜಿಲ್ಲಾಡಳಿತ, ಜಿಲ್ಲಾ ಕುಟುಂಬ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳ್ಯಾರು ಕೂಡ ರೋಗಿಗಳ ಅಳಲನ್ನ ಕೇಳುತ್ತಿಲ್ಲ. ರೋಗ ಗುಣಪಡಿಸಿಕೊಳ್ಳಲು ಬರುವ ರೋಗಿಗಳು ನೆಲದ ಮೇಲೆ ಮಲಗಿ ಸೊಳ್ಳೆಗಳ ಕಾಟಕ್ಕೆ ಮತ್ತಷ್ಟು ರೋಗ ಉಲ್ಬಣಗೊಳಿಸಿಕೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ನಿರ್ಮಾಣವಾಗಿದೆ.