ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೀಂ ಇಂಡಿಯಾ ಅಂಡರ್ 19 ತಂಡ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಅವರನ್ನು ಪ್ರಸ್ತುತ ಸಾಲಿನ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ.
ಬಿಸಿಸಿಐ ಈ ಕುರಿತು ಗುರುವಾರ ಮಾಹಿತಿ ನೀಡಿದ್ದು, ರಾಹುಲ್ ದ್ರಾವಿಡ್ ಹೆಸರಿನೊಂದಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಹಾಗೂ ಮಾಜಿ ನಾಯಕ ಸುನೀಲ್ ಗವಾಸ್ಕರ್ ಹೆಸರನ್ನು ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ.
ಈ ಕುರಿತು ಸುಪ್ರೀಂ ಕೋರ್ಟ್ ನೇಮಿಸಿರುವ ಸಮಿತಿಯ ಮುಖ್ಯಸ್ಥ ವಿನೋದ್ ರಾಯ್ ಸ್ಪಷ್ಟನೆ ನೀಡಿದ್ದು, ವಿವಿಧ ಪ್ರಶಸ್ತಿಗಳಿಗೆ ಹಲವು ಕ್ರಿಕೆಟ್ ಆಟಗಾರರ ಹೆಸರನ್ನು ಶಿಫಾರಸ್ಸು ಮಾಡಿರುವುದಾಗಿ ತಿಳಿಸಿದ್ದಾರೆ.
ಕಳೆದ ವರ್ಷ ಬಿಸಿಸಿಐ ದ್ರೋಣಾಚಾರ್ಯ ಪ್ರಶಸ್ತಿಗೆ ಯಾವುದೇ ಹೆಸರನ್ನು ಶಿಫಾರಸ್ಸು ಮಾಡಿರಲಿಲ್ಲ. ತಂಡಕ್ಕೆ ಬೇರೆ ಬೇರೆ ಕೋಚ್ ಗಳು ತರಬೇತಿ ನೀಡುವುದರಿಂದ ಅಸಮಾನತೆ ಉಂಟಾಗುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿತ್ತು. ಆದರೆ ಈ ವರ್ಷ ರಾಹುಲ್ ದ್ರಾವಿಡ್ ಹೆಸರನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ.
ಕಳೆದ ಬಾರಿ ವಯಕ್ತಿಕ ಶಿಫಾರಸ್ಸಿನ ಆಧಾರದ ಮೇಲೆ ಕೊಹ್ಲಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ರಾಜ್ ಕುಮಾರ್ ಶರ್ಮಾ ಅವರಿಗೆ ದೋರ್ಣಾಚಾರ್ಯ ಪ್ರಶಸ್ತಿಯನ್ನು ನೀಡಲಾಗಿತ್ತು. ಈ ಬಾರಿ ಬಿಸಿಸಿಐ ಆಡಳಿತ ಮಂಡಳಿಯನ್ನು ಒಪ್ಪಿಸಿ ರಾಹುಲ್ ದ್ರಾವಿಡ್ ಹೆಸರನ್ನು ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು.
ಕೊಹ್ಲಿ ಅವರ ಹೆಸರನ್ನು ಬಿಸಿಸಿಐ ಎರಡನೇ ಬಾರಿಗೆ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡುತ್ತಿದೆ. ಕಳೆದ ಬಾರಿ 2016 ರಲ್ಲಿ ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು. ಆದರೆ ಆ ಸಾಲಿನಲ್ಲಿ ರಿಯೋ ಒಲಿಂಪಿಕ್ ಪದಕ ವಿಜೇತರಾಗಿದ್ದ ಪಿವಿ ಸಿಂಧು, ಸಾಕ್ಷಿ ಮಲಿಕ್ ಮತ್ತು ಜಿಮ್ನಾಸ್ಟಿಕ್ಸ್ ಇತಿಹಾಸದಲ್ಲಿ ಭಾರತದ ಪರ ವಿಶೇಷ ಸಾಧನೆ ಮಾಡಿದ್ದ ದೀಪಾ ಕರ್ಮಕರ್ ಅವರಿಗೆ ಖೇಲ್ ರತ್ನ ಪ್ರಶಸ್ತಿ ಸಿಕ್ಕಿತ್ತು.
ಧ್ಯಾನ್ ಚಂದ್ ಪ್ರಶಸ್ತಿಗೆ ಗವಾಸ್ಕರ್ ಅವರ ಹೆಸರು ಪ್ರಶಸ್ತಿಗೆ ಆಯ್ಕೆ ಆಗುವ ಸಾಧ್ಯತೆ ಕಡಿಮೆ ಇದ್ದು, ಸಾಮಾನ್ಯವಾಗಿ ವೃತ್ತಿ ಜೀವನದ ಅವಧಿಯಲ್ಲಿ ಅರ್ಜುನ ಪ್ರಶಸ್ತಿ ಪಡೆದ ಆಟಗಾರರಿಗೆ ಧ್ಯಾನ್ ಚಂದ್ ಪ್ರಶಸ್ತಿ ನೀಡುವುದಿಲ್ಲ. ಗವಾಸ್ಕರ್ ಅವರು ಈಗಾಗಲೇ ಅರ್ಜುನ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.