ನವದೆಹಲಿ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತಮ್ಮ ದೇಶದ ರಾಷ್ಟ್ರಪಿತ ಶೇಕ್ ಮುಜಿಬುರ್ ರೆಹಮಾನ್ ಜನ್ಮ ಶಮಾನೋತ್ಸವ ಸಿದ್ಧತೆ ನಡೆಸಿದೆ. ಈ ಸಂದರ್ಭದಲ್ಲಿ ಏಷ್ಯಾ ಇಲೆವೆನ್ ಮತ್ತು ವರ್ಲ್ಡ್ ಇಲೆವೆನ್ ತಂಡಗಳ ನಡುವೆ ಎರಡು ಟಿ20 ಪಂದ್ಯಗಳನ್ನು ಆಯೋಜಿಸಲು ಮುಂದಾಗಿದೆ.
ಬಿಸಿಬಿಯ ಈ ಮನವಿಗೆ ಐಸಿಸಿ ಕೂಡ ಸಮ್ಮತಿ ಸೂಚಿಸಿದೆ. ಅಲ್ಲದೇ ಪಂದ್ಯಗಳ ವೇಳಾಪಟ್ಟಿ ಹಾಗೂ ಏಷ್ಯಾ ಇಲೆವೆನ್ ಆಟಗಾರರ ಪಟ್ಟಿಯನ್ನು ನೀಡಲು ಸೂಚಿಸಿದೆ. ಆದರೆ ಏಷ್ಯಾ ಇಲೆವೆನ್ ಪಟ್ಟಿಯಲ್ಲಿ ಪಾಕಿಸ್ತಾನದ ಆಟಗಾರು ಅವಕಾಶ ಪಡೆದರೆ ಬಿಸಿಸಿಐ ಭಾರತೀಯ ಆಟಗಾರರಿಗೆ ಅವಕಾಶ ನೀಡುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿತ್ತು.
ಒಂದೊಮ್ಮೆ ಏಷ್ಯಾ ಇಲೆವೆನ್ ತಂಡದಲ್ಲಿ ಪಾಕ್ ಆಟಗಾರರಿಗೆ ಅವಕಾಶ ನೀಡಿದರೆ, ಭಾರತ ಆಟಗಾರರು ಇದೇ ತಂಡದಲ್ಲಿ ಆಡುವುದು ಕಷ್ಟಸಾಧ್ಯ. ಬಿಸಿಸಿಐ ಕೂಡ ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಿರುವ ಬಿಸಿಬಿ ಏಷ್ಯಾ ಇಲೆವೆನ್ ತಂಡದಲ್ಲಿ ಪಾಕ್ ಆಟಗಾರರಿಗೆ ಅವಕಾಶವಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಸಿಸಿಐ ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್, ಏಷ್ಯಾ ಇಲೆವೆನ್ ತಂಡದಲ್ಲಿ ಪಾಕ್ ಹಾಗೂ ಭಾರತದ ಆಟಗಾರರು ಒಂದೇ ತಂಡದಲ್ಲಿ ಆಡುವ ಸನ್ನಿವೇಶ ಉದ್ಭವಿಸುವುದಿಲ್ಲ. ಏಕೆಂದರೆ ಪಾಕಿಸ್ತಾನದ ಯಾವುದೇ ಆಟಗಾರನಿಗೆ ಪಂದ್ಯಗಳಿಗೆ ಆಹ್ವಾನ ನೀಡಿಲ್ಲ ಎಂದಿದ್ದಾರೆ. ಸದ್ಯ ಏಷ್ಯಾ ಇಲೆವೆನ್ ತಂಡದಲ್ಲಿ ಭಾರತದ 5 ಆಟಗಾರರು ಆಡಲಿದ್ದು, ಈ ಆಟಗಾರರನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಆಯ್ಕೆ ಮಾಡಲಿದ್ದಾರೆ.
ಇತ್ತೀಚೆಗಷ್ಟೇ ಭಾರತದಲ್ಲಿನ ಭದ್ರತೆ ಕುರಿತು ಹೇಳಿಕೆ ನೀಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ, ಭದ್ರತೆಯ ದೃಷ್ಟಿಯಲ್ಲಿ ಭಾರತಕ್ಕಿಂತ ಪಾಕಿಸ್ತಾನವೇ ಹೆಚ್ಚು ಸುರಕ್ಷಿತ ಎಂಬುದನ್ನು ನಾವು ಸಾಬೀತು ಪಡಿಸಿದ್ದೇವೆ ಎಂದಿದ್ದರು.
ಶ್ರೀಲಂಕಾ ಟೆಸ್ಟ್ ಸರಣಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಪಾಕಿಸ್ತಾನ ಸರಣಿಯ ಬಳಿಕ ಪಾಕ್ ಕ್ರಿಕೆಟ್ ಆಡಲು ಸೂಕ್ತ ದೇಶ. ಪಾಕ್ನಲ್ಲಿ ಕ್ರಿಕೆಟ್ ಪುನರುಜ್ಜೀವನಗೊಳ್ಳಲು ಈ ಸರಣಿ ಮಹತ್ವ ವಹಿಸಿದೆ ಎಂದು ಪಿಸಿಬಿ ಹೇಳಿತ್ತು. ಕಳೆದ 2 ದಿನಗಳ ಹಿಂದೆ ಸೌರವ್ ಗಂಗೂಲಿ ಅವರ ಸೂಪರ್ ಸೀರಿಸ್ ಕ್ರಿಕೆಟ್ ಯೋಜನೆಯನ್ನು ಪಾಕ್ ಮಾಜಿ ಆಟಗಾರ ರಶೀದ್ ಲತೀಫ್ ಟೀಕೆ ಮಾಡಿ ಇದು ಫ್ಲಾಪ್ ಪ್ಲಾನ್ ಎಂದಿದ್ದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತ ಕಡೆಗೆ ಒಲವು ತೋರಿರುವ ಬಾಂಗ್ಲಾದೇಶ ಪಾಕ್ ಆಟಗಾರರಿಗೆ ಏಷ್ಯಾ ಇಲೆವೆನ್ಗೆ ಆಹ್ವಾನವನ್ನೇ ನೀಡಿಲ್ಲ.