ದಾವಣಗೆರೆ: ಯಾವುದೇ ಕಾರಣಕ್ಕೂ ಈ ತಿಂಗಳ 30ರೊಳಗೆ ಸಂಪುಟ ವಿಸ್ತರಣೆ ಆಗಿಯೇ ಆಗುತ್ತದೆ. ಸೋತವರಿಗೂ ಕೂಡ ಸಚಿವ ಸ್ಥಾನ ಸಿಗುತ್ತೆ ಎಂದು ದಾವಣಗೆರೆಯಲ್ಲಿ ಬಿಜೆಪಿ ಶಾಸಕ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದರು.
ನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ಸೋತವರಿಗೆ ಸಚಿವ ಸ್ಥಾನ ಇಲ್ಲಾ ಎಂಬುದು ತಪ್ಪು. ಈಗ ಸೋತವರಿಗೆ ಎಂಎಲ್ಸಿ ನೀಡಬೇಕು, ಆಗ ಸಚಿವ ಸ್ಥಾನ ನೀಡಲು ಸಾಧ್ಯ. ಇದಕ್ಕಾಗಿ ಸ್ವಲ್ಪ ವಿಳಂಬ ಆಗಬಹುದು. ಅಲ್ಲದೆ ಈ ಕಾರಣಕ್ಕೆ ಸೋತವರಿಗೆ ಸದ್ಯಕ್ಕೆ ಸಚಿವ ಸ್ಥಾನ ನೀಡಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 17 ಜನಕ್ಕೂ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿ ಅಥವಾ ಬಿಜೆಪಿ ಹೈಕಮಾಂಡ್ ಯಾವುದೇ ರೀತಿಯ ಬೇಸರ ವ್ಯಕ್ತಪಡಿಸಿಲ್ಲ ಎಂದರು.
ಈ ಹಿಂದೆ ಯತ್ನಾಳ್ ಬಿಜೆಪಿಗರು ಬಹಳಷ್ಟು ಅಧಿಕಾರ ಅನುಭವಿಸಿದ್ದಾರೆ. ಅವರಿಂದ ಸಚಿವ ಸ್ಥಾನ ತೆಗೆದುಕೊಂಡು ಬಿಜೆಪಿ ಸೇರ್ಪಡೆಯಾದ ಶಾಸಕರಿಗೆ ನೀಡಲಿ ಎಂದು ಹೇಳಿದ್ದರು. ಯತ್ನಾಳ್ ಹೇಳಿಕೆಗೆ ಉತ್ತರ ನೀಡದ ಬಿ.ಸಿ ಪಾಟೀಲ್, ಅದು ಅವರ ವೈಯಕ್ತಿಕ ಅಭಿಪ್ರಾಯ. ಆದರೆ 30ರೊಳಗೆ ಸಂಪುಟ ವಿಸ್ತರಣೆ ಆಗುತ್ತದೆ. ಅವರು ಕೊಟ್ಟ ಖಾತೆ ನಿರ್ವಹಣೆ ಮಾಡುವೆ. ಇದೇ ಖಾತೆ ಬೇಕು ಎಂದು ನಾನು ಕೇಳಿಲ್ಲ ಎಂದು ಬಿ.ಸಿ.ಪಾಟೀಲ್ ಹೇಳಿದರು.