ಬೆಂಗಳೂರು: ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಈ ಬಾರಿ ಮಕ್ಕಳ ಸ್ನೇಹಿಯಾಗಿ ಪ್ರಶ್ನೆ ಪತ್ರಿಕೆ ಇರಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೆ ಮಾದರಿಯವ ಪ್ರಶ್ನೆ ಪತ್ರಿಕೆಯಲ್ಲೇ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೊದಲಿನಿಂದಲೂ ಮಕ್ಕಳಿಗೆ ತಿಳಿಸಿದ್ದೇವೆ. ಜೊತೆಗೆ ಮಾದರಿ ಪ್ರಶ್ನೆ ಪತ್ರಿಕೆ ನೀಡಿದ್ದೇವೆ. ಇದರಿಂದಾಗಿ ಮಕ್ಕಳು ಸಿದ್ಧರಾಗಿದ್ದಾರೆ ಹಾಗೂ ಶಿಕ್ಷಕರು ಸಿದ್ಧಪಡಿಸಿದ್ದಾರೆ. ಧೈರ್ಯವಾಗಿ ಪರೀಕ್ಷೆ ಬರೆಯುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಈ ಬಾರಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು 8 ಮತ್ತು 9ನೇ ತರಗತಿಯ ಪರೀಕ್ಷೆಯನ್ನು ಬರೆದಿಲ್ಲ ಎಂಬುದನ್ನು ಗಣನೆಗೆ ತೆಗೆದುಕೊಂಡಿದ್ದೇವೆ. ಈ ಬಾರಿ ತರಗತಿ ಪ್ರಾರಂಭವಾಗುವುದರಲ್ಲಿ ನಿಧಾನವಾಗಿತ್ತು. ಇದರಿಂದ ಈ ಸಲ ಒಂದಿಷ್ಟು ಆಯ್ಕೆಗಳನ್ನು ಜಾಸ್ತಿ ಮಾಡಿದ್ದೇವೆ ಎಂದು ತಿಳಿಸಿದರು.
ಹಿಜಬ್ ನೆಪದಲ್ಲಿ ಕೆಲ ಸಂಘಟನೆಗಳು ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗೆ ಹೋಗುವುದನ್ನು ನಿಲ್ಲಿಸುತ್ತಾರೆ ಎಂಬ ಮಾನಸಿಕತೆಯಲ್ಲಿ ಇದ್ದರು. ಅವರು ಫೇಲ್ ಆಗಿದ್ದಾರೆ. ಈ ಸಂಘಟನೆಯ ಉದ್ದೇಶ ಒಂದೇ ಯಾರೂ ಓದಿ ಸ್ವಾವಲಂಬಿಗಳಾಗಬಾರದು. ಅವರ ಶಿಕ್ಷಣವು ಮೊಟಕುಗೊಳಿಸಬೇಕು ಎಂಬುದಾಗಿತ್ತು ಎಂದು ಕಿಡಿಕಾರಿದರು. ಇದನ್ನೂ ಓದಿ: ಇಂದಿನಿಂದ SSLC ಪರೀಕ್ಷೆ – ಸಮವಸ್ತ್ರ ಧರಿಸಿದ್ರೆ ಮಾತ್ರ ಪ್ರವೇಶಕ್ಕೆ ಅನುಮತಿ
ಹಿಜಬ್ ವಿಷಯ ಸುಪ್ರೀಕೋರ್ಟ್ನಲ್ಲಿರುವುದರಿಂದ ನಾನು ಈ ಬಗ್ಗೆ ಜಾಸ್ತಿ ಮಾತನಾಡುವುದಿಲ್ಲ. ಆದರೆ ಹೈಕೋರ್ಟ್ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್ಗೆ ಅವಕಾಶವಿಲ್ಲ ಎಂಬ ತೀರ್ಪನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಹೈಕೊರ್ಟ್ನ ಅರ್ಜಿಯನ್ನು ಎತ್ತಿ ಹಿಡಿಯುತ್ತೇವೆ. ಹಿಜಬ್ ಧರಿಸಿದ್ರೆ ಎಕ್ಸಾಂ ಅವಕಾಶ ಇಲ್ಲ ಎಂದು ತಿಳಿಸಿದರು.
ಪರೀಕ್ಷೆ ಮುಗಿದ ನಂತರದಲ್ಲಿ ಮೌಲ್ಯಮಾಪನ ವ್ಯವಸ್ಥಿತವಾಗಿ ನಡೆಯುತ್ತದೆ. ಪರೀಕ್ಷೆ ಮುಗಿದ ಸ್ವಲ್ಪ ದಿನಗಳಲ್ಲಿ ಫಲಿತಾಂಶ ಪ್ರಕಟ ಮಾಡುತ್ತೇವೆ ಎಂದರು. ಇದನ್ನೂ ಓದಿ: ಧರ್ಮ ಸಂಘರ್ಷದ ನಡುವೆ ಸಾಮರಸ್ಯದ ಬದುಕು- ಹಿಂದೂ ಸ್ನೇಹಿತನ ಕಷ್ಟಕ್ಕೆ ನೆರವಾದ ಮುಸ್ಲಿಂ ಗೆಳೆಯ