ಬೆಂಗಳೂರು: ಬಫರ್ ವಲಯದಲ್ಲಿ (Buffer Zone) ಮನೆಗಳನ್ನು ನಿರ್ಮಾಣ ಮಾಡಿದವರಿಗೆ ಬಿಬಿಎಂಪಿ (BBMP) ಶಾಕ್ ನೀಡಲು ಮುಂದಾಗಿದೆ. ಮೊದಲು ವಿದ್ಯುತ್ ಕಡಿತ ಮಾಡಿ ನಂತರ ಬಫರ್ ಝೋನ್ನಲ್ಲಿ ನಿರ್ಮಾಣ ಆಗಿರುವ ಕಟ್ಟಡಗಳ ತೆರವಿಗೆ ಪ್ಲ್ಯಾನ್ ಮಾಡಿದ್ದು, ನಿರ್ಮಾಣ ಹಂತದ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ಮಾಡುತ್ತಿದೆ.
ಬೆಂಗಳೂರಿನಲ್ಲಿ ರಾಜ ಕಾಲುವೆ, ಸರ್ಕಾರಿ ಜಾಗ, ಕೆರೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿದ ಪ್ರಕರಣ ಜಾಸ್ತಿ ಇದೆ. ಇವುಗಳನ್ನೇ ತೆರವು ಮಾಡಿಸಲು ಬಿಬಿಎಂಪಿ ಹೆಣಗಾಡುತ್ತಿದೆ. ಈಗ ಬಫರ್ ಝೋನ್ ಗುರಿಯಾಗಿಸಿಕೊಂಡು ಕಾರ್ಯಾಚರಣೆ ಮಾಡಲು ಮುಂದಾಗಿದೆ. ಇದನ್ನೂ ಓದಿ: ʻದೈಹಿಕ ಸಂಬಂಧʼ ಅಂದ್ರೆ ಲೈಂಗಿಕ ದೌರ್ಜನ್ಯ ಎಂದರ್ಥವಲ್ಲ – ಪೋಕ್ಸೋ ಕೇಸ್ ಆರೋಪಿ ಖುಲಾಸೆಗೊಳಿಸಿದ ದೆಹಲಿ ಹೈಕೋರ್ಟ್
ಬಫರ್ ವಲಯದಲ್ಲಿ, ಚರಂಡಿ, ಕಾಲುವೆ ಮೇಲೆ ಮನೆ ನಿರ್ಮಾಣ ಮಾಡಲಾಗಿದೆ. ಆ ರೀತಿ ಬಫರ್ ಝೋನ್ ಮೇಲೆ ಕಟ್ಟಡ ನಿರ್ಮಾಣ ಮಾಡುತ್ತಿರುವ ಕಡೆ ಗುರುತು ಮಾಡಿ ಬೆಸ್ಕಾಂ ಕಡೆಯಿಂದ ನೋಟಿಸ್ ಕೊಡಿಸಲು ಪಾಲಿಕೆ ಚಿಂತನೆ ನಡೆಸಿದೆ. ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೋಟಿಸ್ ಕೊಡಿಸುವ ತೀರ್ಮಾನಕ್ಕೆ ಬರಲಾಗಿದೆ.
ಯಲಹಂಕದ ನರಸೀಪುರ ಸೇರಿದಂತೆ ಹಲವು ಕಡೆ ಕೆರೆ ಜಾಗವನ್ನು ಒತ್ತುವರಿ ಮಾಡಿ ಮನೆ ನಿರ್ಮಾಣ ನಿರ್ಮಿಸಲಾಗುತ್ತಿದೆ. ನಿರ್ಮಾಣ ಹಂತದಲ್ಲಿರುವಾಗಲೇ ಬೆಸ್ಕಾಂ ಕಡೆಯಿಂದ ನೋಟಿಸ್ ಕೊಡಿಸಿ, ವಿದ್ಯುತ್ ಸಂಪರ್ಕ ಕಡಿತ ಮಾಡಿ ನಂತರ ಸೂಕ್ತ ಕ್ರಮ ಜರುಗಿಸುವಂತೆ ಮುಖ್ಯ ಆಯುಕ್ತರು ಎಲ್ಲಾ ವಲಯದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಎಲ್ಲಾ ಕಡೆ ಕೂಡ ಬೆಸ್ಕಾಂ ಕಡೆಯಿಂದ ಬಿಬಿಎಂಪಿ ನೋಟಿಸ್ ನೀಡಿ ಕಟ್ಟಡ ತೆರವು ಮಾಡುತ್ತಾ? ಅಥವಾ ಒತ್ತಡಕ್ಕೆ ಮಣಿದು ಸುಮ್ಮನಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.