– ಇತ್ತ ಆಪರೇಷನ್ ಭಯಕ್ಕೆ ರೆಸಾರ್ಟ್ ನತ್ತ ಹೊರಟ ಪಾಲಿಕೆ ಸದಸ್ಯರು
ಬೆಂಗಳೂರು: ಬಿಬಿಎಂಪಿ ಮೇಯರ್ ಗಿರಿಗಾಗಿ ಭಾರೀ ಲಾಬಿ ನಡೆಯುತ್ತಿದ್ದು, ಒಂದು ವೋಟಿಗೆ ಕೋಟಿ ಕೋಟಿ ರೂಪಾಯಿ ರವಾನೆಯಾಗಿದೆಯಂತೆ. ಇದಲ್ಲದೇ ಬಿಜೆಪಿಯ ಆಪರೇಷನ್ ಕಮಲದ ದಾಳಿಗೆ ತಪ್ಪಿಸಿಕೊಳ್ಳಲು ಪಕ್ಷೇತರ ಸದಸ್ಯರನ್ನು ರೆಸಾರ್ಟ್ ನತ್ತ ಕಳುಹಿಸಿಕೊಡಲು ಕಾಂಗ್ರೆಸ್ ಮುಂದಾಗಿದೆ ಎನ್ನುವ ಮಾಹಿತಿ ಸಹ ಲಭ್ಯವಾಗಿದೆ.
ಹೌದು, ಬಿಬಿಎಂಪಿ ಮೇಯರ್ ಗಿರಿಗಾಗಿ ರೆಸಾರ್ಟ್ ರಾಜಕಾರಣ ಶುರುವಾಗಿದೆ. ಭಾರೀ ಡಿಮ್ಯಾಂಡ್ನಲ್ಲಿರುವ ಬಿಬಿಎಂಪಿ ಪಕ್ಷೇತರ ಸದಸ್ಯರನ್ನು ಗೋವಾಕ್ಕೆ ಕಳುಹಿಸುತ್ತಿದ್ದು, ಚುನಾವಣೆಗೆ ಮುನ್ನ 10 ದಿನದ ಮೊದಲೇ ರೆಸಾರ್ಟ್ ರಾಜಕಾರಣವನ್ನು ಕಾಂಗ್ರೆಸ್ ಶುರುಮಾಡಿದೆ. ಅಲ್ಲದೇ 8 ಜನ ಪಕ್ಷೇತರ ಶಾಸಕರ ಮನ ಒಲಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕ ರಾಮಲಿಂಗಾ ರೆಡ್ಡಿಯವರ ಸಂಧಾನ ಯಶಸ್ವಿಯಾಗಿದ್ದು, ಹೀಗಾಗಿ ಬಿಜೆಪಿಯ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಲು ರೆಸಾರ್ಟ್ ರಾಜಕಾರಣ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.
ಇದೇ ತಿಂಗಳ 28ರಂದು ನಡೆಯುವ ಬಿಬಿಎಂಪಿ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷೇತರರಿಗೆ ಭಾರೀ ಡಿಮ್ಯಾಂಡ್ ಬಂದಿದ್ದು, ಒಂದೇ ಒಂದು ವೋಟಿಗೆ ಕೋಟಿ ಕೋಟಿ ರೂಪಾಯಿ ಜೊತೆಗೆ ಲಾಭದಾಯಕ ಸ್ಥಾಯಿ ಸಮಿತಿ ಸದಸ್ಯ ಸ್ಥಾನವನ್ನು ನೀಡಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಬಿಬಿಎಂಪಿಯ 8 ಜನ ಪಕ್ಷೇತರ ಸದಸ್ಯರು ರಾತ್ರೋ ರಾತ್ರಿ ಕೋಟ್ಯಧಿಪತಿಗಳಾಗಲಿದ್ದಾರೆ. ಅಲ್ಲದೇ ಆಡಳಿತ ರೂಢ ಕಾಂಗ್ರೆಸ್ ಈಗಾಗಲೇ 2 ಕೋಟಿ ರೂಪಾಯಿ ಹಣವನ್ನು ರವಾನಿಸಿದೆ ಎಂಬುದರ ಬಗ್ಗೆ ಮಾಹಿತಿ ಲಭಿಸಿದೆ.
ಪಕ್ಷೇತರ ಶಾಸಕರು ರಾಜ್ಯದಿಂದ ಹೊರಗೆ ಹೋಗುತ್ತಾ ಇರುವುದು ನಿಜ. ಮಂಗಳವಾರ ಪಕ್ಷೇತರರು ಬೆಂಗಳೂರು ಬಿಡಲಿದ್ದಾರೆ. ಆದರೆ ಅವರು ಗೋವಾಕ್ಕೆ ತೆರಳುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಗೋವಾದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿರುವುದು ಮುನ್ನೆಚ್ಚರಿಕಾ ಕ್ರಮವಾಗಿ ಆಂಧ್ರಪ್ರದೇಶ, ತಮಿಳುನಾಡು ಅಥವಾ ಕೇರಳ ಕಡೆ ಹೋಗಬಹುದೆಂದು ಮಾಹಿತಿ ಲಭ್ಯವಾಗಿದೆ. ಆದರೆ ಇದುವರೆಗೆ ಎಲ್ಲಿಗೆ ಹೋಗುತ್ತಾರೆ ಎನ್ನುವುದು ಖಚಿತವಾಗಿಲ್ಲ. ಈ ಎಲ್ಲಾ ಪಕ್ಷೇತರ ಸದಸ್ಯರು ಕಾಂಗ್ರೆಸ್ ಪರವಾಗಿಯೇ ಇದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv