ಬೆಂಗಳೂರು: ಬಿಬಿಎಂಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಾಣಂತಿಯರಿಗೆ ಪೌಷ್ಟಿಕಾಂಶ ನೀಗಿಸಲು ದಿನಕ್ಕೆ 2 ಬಾರಿ ಹಾಲು ವಿತರಿಸಲು ಕರೆದಿದ್ದ ಟೆಂಡರ್ ಪ್ರಕ್ರಿಯೆಗೆ ಯಾವೊಬ್ಬ ಗುತ್ತಿಗೆದಾರರು ಮುಂದೆ ಬಂದಿಲ್ಲ. ಹೀಗಾಗಿ ಆಸ್ಪತ್ರೆಯ ಅಧಿಕಾರಿಗಳೇ ನೇರವಾಗಿ ಹಾಲು ಖರೀದಿಸಿ, ವಿತರಿಸುವ ವ್ಯವಸ್ಥೆ ಜಾರಿಗೆ ತರಲು ಬಿಬಿಎಂಪಿ ತೀರ್ಮಾನಿಸಿದೆ.
ರಾಜ್ಯ ಸರ್ಕಾರದ “ಜನನಿ ಸುರಕ್ಷಾ” ಮೂಲಕ ಪೌಷ್ಟಿಕ ಆಹಾರವನ್ನು ವಿತರಿಸುವ ಯೋಜನೆ ಜಾರಿಗೆ ಬಂದ ನಂತರ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಹಾಲು ವಿತರಿಸುವ ಯೋಜನೆಯನ್ನ ನಿಲ್ಲಿಸಲಾಗಿತ್ತು. ಆದರೆ ಈಗ ಪಾಲಿಕೆ ಹಾಲು ವಿತರಣೆ ಪುನರಾಂಭಿಸಲು ನಿರ್ಧರಿಸಿದೆ.
ಬಿಬಿಎಂಪಿಯ 32 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಬಾಣಂತಿಯರಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಲಾ ಎರಡು ಬಾರಿಯಂತೆ 250 ಮಿಲಿ ಲೀಟರ್ ಹಾಲನ್ನ ವಿತರಿಸಲು ಯೊಜನೆ ಸಿದ್ಧಪಡಿಸಿ ಹಾಲು ಸರಬರಾಜಿಗೆ ಎರಡು ಬಾರಿ ಟೆಂಡರ್ ನ್ನು ಆಹ್ವಾನಿಸಿತ್ತು. ಆದರೆ ಈ ಟೆಂಡರ್ ಗೆ ಯಾವ ಗುತ್ತಿಗೆದಾರರು ಆಸಕ್ತಿ ತೋರಿರಲಿಲ್ಲ. ಹೀಗಾಗಿ ಪಾಲಿಕೆ ಆಸ್ಪತ್ರೆಯ ಅಧಿಕಾರಿಗಳೇ ಅವಶ್ಯಕತೆಗೆ ತಕ್ಕಂತೆ ಹಾಲು ಖರೀದಿಸಿ ಬಾಣಂತಿಯರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ಬಿಬಿಎಂಪಿ ಆಸ್ಪತ್ರೆಯಲ್ಲಿ ವರ್ಷಕ್ಕೆ 11 ಸಾವಿರ ಹೆರಿಗೆ ಆಗಲಿವೆ ಅಂತ ಅಂದಾಜಿಸಲಾಗಿದ್ದು, ಸುಮಾರು ಮೂವತ್ತು ಸಾವಿರ ಲೀಟರ್ ಹಾಲು ಬೇಕಾಗಲಿದೆ. ಈ ಯೋಜನೆಗಾಗಿ ಸುಮಾರು 15 ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಪ್ರತಿದಿನ ಆಸ್ಪತ್ರೆಗಳೇ ಹಾಲು ಖರೀದಿ ಮಾಡಿದ ನಂತರ ಆಸ್ಪತ್ರೆ ಸಿಬ್ಬಂದಿ ಹಾಲು ಕಾಯಿಸಿ ಬೆಳಗ್ಗೆ- ಸಂಜೆ ಹಾಲು ವಿತರಣೆ ಮಾಡಲಿದ್ದಾರೆ.