ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಭಾರೀ ಹೈಡ್ರಾಮ ನಡೆದಿದೆ. ಅಧ್ಯಕ್ಷ ಸ್ಥಾನ ಕೊಡದಿದ್ದಕ್ಕೆ ಕಾರ್ಪೋರೇಟರ್ ಮಹಾಲಕ್ಷ್ಮಿ ಕಣ್ಣೀರು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಖಂಡಿತಾ ನಿರಾಸೆಯಾಗಿದೆ. ಅಧ್ಯಕ್ಷ ಸ್ಥಾನ ಕೊಡುತ್ತೇನೆ ಎಂದು ಹೇಳಿ ಕೊಡಲಿಲ್ಲ. ಈಗ ಸದಸ್ಯತ್ವ ಕೊಡುವುದಾಗಿ ಇದ್ದಾರೆ. ಆದರೆ ಇದರಿಂದ ನನಗೆ ನಿರಾಸೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರಕ್ಕೋಸ್ಕರ ಏನು ಮಾಡಬೇಕು ಅಂತ ನಿಮಗೆ ಎಲ್ಲಾ ಗೊತ್ತಿದೆ. ನಾನು ಇದೇ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಕೊಡಿ ಅಂತ ಬೇಡಿಕೆ ಇಟ್ಟಿರಲಿಲ್ಲ. ಆದರೂ ಅವರಾಗಿಯೇ ಕೊಡುವುದಾಗಿ ಹೇಳಿ ಈಗ ಕೊಟ್ಟಿಲ್ಲ. ಇದರಿಂದ ನನಗೆ ನಿರಾಸೆಯಾಗಿದೆ ಎಂದು ತಮ್ಮ ಅಳಲುತೋಡಿಕೊಂಡರು.
ಇಂದು ಬಿಬಿಎಂಪಿ 12 ಸ್ಥಾಯಿ ಸಮಿತಿಯ ಸ್ಥಾನಗಳಿಗೆ ಬಿಬಿಎಂಪಿ ಕೇಂದ್ರ ಕಛೇರಿ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಚುನಾವಣೆ ನಡೆಯುತ್ತಿದೆ. ಬೆಳ್ಳಗ್ಗೆ 8 ಗಂಟೆಯಿಂದ 9.30 ರ ವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿತ್ತು. ನಾಮಪತ್ರ ಸಲ್ಲಿಕೆ ಬಳಿಕ ಚುನಾವಣೆ ಆರಂಭ ಮಾಡಲಾಗಿದೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಎನ್. ವಿ ಪ್ರಸಾದ್ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದ್ದು, ಇದುವರೆಗೂ ನಿಗದಿಯಾಗಿ ಮೂರು ಬಾರಿ ಚುನಾವಣೆ ಮುಂದೂಡಿಕೆ ಆಗಿದೆ. ನಾಮಪತ್ರ ಸಲ್ಲಿಕೆಯಾಗಲ್ಲ ಅಂತ ಚುನಾವಣೆ ಮುಂದೂಡಿಕೆ ಆಗಿತ್ತು.
ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಈ ನಿಷೇಧಾಜ್ಞೆಯನ್ನು ಜಾರಿ ಮಾಡಿದ್ದಾರೆ.