ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್ನಲ್ಲಿ ನಡೆಯಲಿರುವ ಅವರೆಕಾಯಿ ಮೇಳ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಈ ವರ್ಷ ಅವರೆಕಾಯಿ ಮೇಳ ನಡೆಯುವುದು ಅನುಮಾನ. ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಮೇಳ ನಡೆಸಲು ಅನುಮತಿ ನಿರಾಕರಿಸಿದ್ದಾರೆ.
ಅವರೆಕಾಳು ಮೇಳ ಕಳೆದ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ ಈ ಬಾರಿ ಸ್ಥಳೀಯ ವೆಲ್ಫೇರ್ ಅಸೋಸಿಯೇಷನ್ ಹಾಗೂ ಪಾಲಿಕೆ ಸದಸ್ಯ ಕಮೀಷನರ್ ಗೆ ಮನವಿ ಮಾಡಿದ್ದು, ಮೇಳ ನಡೆಯಲು ಅವಕಾಶ ನೀಡಬಾರದೆಂದು ಮನವಿ ಮಾಡಿದ್ದಾರೆ ಎಂದು ಖುದ್ದು ಕಮೀಷನರ್ ಅನಿಲ್ ಕುಮಾರ್ ಹೇಳಿದರು.
ಮೇಳದಿಂದ ಒಂದು ಕುಟುಂಬಕ್ಕೆ ಮಾತ್ರ ಸಹಾಯವಾಗುತ್ತಿದೆ. ಅವರೆ ಮಿಕ್ಸಚರ್, ಅವರೆ ದೋಸೆ, ಹಲ್ವಾ, ಪೇಡಾ ಎಲ್ಲ ತಯಾರಾಗುತ್ತಿತ್ತು. ಹಾಗೇ ಅದು ಒಂದು ಕುಟುಂಬದ ಲಾಭವಾಗಿತ್ತು. ಜೊತೆಗೆ ಸ್ವಚ್ಛತೆಯನ್ನು ಕಾಪಾಡುತ್ತಿರಲಿಲ್ಲ. ಹೀಗಾಗಿ ಅವರೆ ಮೇಳಕ್ಕೆ ಅನುಮತಿ ನೀಡಿಲ್ಲ ಎಂದು ಕಮೀಷನರ್ ತಿಳಿಸಿದರು.
ಬಿಬಿಎಂಪಿ ಮೂಲಗಳ ಮಾಹಿತಿಯಂತೆ ಅವರೆ ಮೇಳದಿಂದ ರೈತರಿಗೆ ಸಹಾಯವಾಗುತ್ತದೆ ಅನುಮತಿ ನೀಡಿ ಎಂದು ಶಿಫಾರಸ್ಸುಗಳ ಸುರಿಮಳೆಯಾಗಿದೆ. ಉಪಮುಖ್ಯಮಂತ್ರಿ, ಮೇಯರ್, ಶಾಸಕರು, ವಿಧಾನ ಪರಿಷತ್ ಸದಸ್ಯರೆಲ್ಲ ಆಯುಕ್ತರಿಗೆ ಕರೆ ಮಾಡಿದ್ದಾರೆ.