ತುಮಕೂರು: ಕಾಂಗ್ರೆಸ್ನವರು ಕೇಸರಿ ಶಲ್ಯ ಧರಿಸಿರೋದು ಒಳ್ಳೆಯ ಸಂಕೇತ. ಶ್ರೀರಾಮಚಂದ್ರನೇ ಅವರಿಗೆ ಒಳ್ಳೆ ಬುದ್ದಿಕೊಟ್ಟು ಈ ರೀತಿಯ ಪರಿವರ್ತನೆಗೆ ಕಾರಣರಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೇಸರಿ ಶಾಲು ಕಂಡರೆ ಉರಿದು ಬೀಳೋ ಕಾಂಗ್ರೆಸ್ನವರು ಇಂದು ಕೇಸರಿ ಶಲ್ಯ ಹಾಕಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಈ ಘಟನೆ ಕುರಿತಂತೆ ಕುಣಿಗಲ್ನಲ್ಲಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ನವರು ಕೇಸರಿ ಶಲ್ಯ ಧರಿಸಿರೋದು ಒಳ್ಳೆಯ ಸಂಕೇತವಾಗಿದೆ. ಶ್ರೀರಾಮಚಂದ್ರನೇ ಅವರಿಗೆ ಒಳ್ಳೆಯ ಬುದ್ದಿಕೊಟ್ಟು ಈ ರೀತಿಯ ಪರಿವರ್ತನೆಗೆ ಕಾರಣರಾಗಿದ್ದಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇದೇ ವೇಳೆತೈಲ ಬೆಲೆ ಇಳಿಕೆ ಮಾಡೋ ವಿಚಾರದಲ್ಲಿ ಮಾತನಾಡಿ, ನಾವೊಬ್ಬರೇ ಬೆಲೆ ಇಳಿಕೆ ಮಾಡೋಕೆ ಆಗಲ್ಲ. ಕಳೆದ ಬಾರಿ ರಾಜ್ಯ ಸರ್ಕಾರ 7 ರೂಪಾಯಿ ಇಳಿಕೆ ಮಾಡಿತ್ತು. ಅಂತರಾಷ್ಟ್ರೀಯ ತೈಲ ದರದ ಏರಿಕೆ ಮೇಲೆ ಇಲ್ಲಿ ಬೆಲೆ ಏರಿಕೆಯಾಗಿದೆ. ಬರುವಂತಹ ದಿನಗಳಲ್ಲಿ ಜನರಿಗೆ ಆದಷ್ಟು ಭಾರ ಆಗಬಾರದು ಅನ್ನುವ ಉದ್ದೇಶದಿಂದ ಇಳಿಕೆ ಮಾಡುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಯುಪಿ ಸಿಎಂ ಕಚೇರಿಯ ಟ್ವಿಟ್ಟರ್ ಖಾತೆ ಹ್ಯಾಕ್
ಗೃಹ ಸಚಿವರು ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್ ಹೇಳಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಕೆಲವು ಮಾಹಿತಿ ಮೂಲಕ ಅದು ವ್ಯತ್ಯಾಸ ಉಂಟಾಗಿದೆ ಅಷ್ಟೇ. ಅದನ್ನ ಸಿಐಡಿಗೆ ತನಿಖೆ ನಡೆಸಲು ಕೊಟ್ಟಿದ್ದು, ಸಿಐಡಿ ತನಿಖೆಯಿಂದ ಸತ್ಯ ಹೊರಬರುತ್ತೆ ಎಂದರು.