ಹಾವೇರಿ: ಶಾಲೆಗಳನ್ನು ಪ್ರಾರಂಭ ಮಾಡುವಂತೆ ಮೊದಲು ಹೇಳಿದವನೇ ನಾನು. ಕೊರೊನಾದಿಂದ ಶಾಲೆಗಳು ಬಂದ್ ಆದಾಗ ಶಾಲೆ ಮತ್ತು ಮಕ್ಕಳ ಸಂಬಂಧ ಕಡಿತವಾಯ್ತು. ಎಲ್ಲರೂ ಪಾಸ್ ಆಗಲು ಶುರುವಾಯಿತು. ಮಕ್ಕಳ ಮತ್ತು ಶಾಲೆಯ ಸಂಬಂಧ ತಪ್ಪಬಾರದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಮೊದಲು ವಿದ್ಯಾಗಮ ಯೋಜನೆಯೂ ಬೇಡವೆಂದು ಹೇಳಿದ್ದೆ ಹಾಗೂ ಹತ್ತತ್ತು ಮಕ್ಕಳನ್ನು ಕೂರಿಸಿ ಪಾಠ ಮಾಡುವಂತೆ ತಿಳಿಸಿದ್ದೇನೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಹೊಸ ಶಿಕ್ಷಣ ಮಂತ್ರಿಗಳು ಬಂದು ಮೊದಲು ನನ್ನನ್ನೇ ಭೇಟಿ ಮಾಡಿದರು. ಆವಾಗಲೂ ಶಾಲೆ ಆರಂಭ ಮಾಡುವಂತೆ ಹೇಳಿದ್ದೇನೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಲೆಗಳ ಆರಂಭದ ಬಗ್ಗೆ ಸಮಿತಿ ರಚನೆ ಮಾಡುವಂತೆ ತಿಳಿಸಿದ್ದೇನೆ. ಮಕ್ಕಳಿಗೆ ಏನಾದರೂ ಆದರೆ ಸಮಿತಿ ಜವಾಬ್ದಾರಿ. ಮಕ್ಕಳ ಬಗ್ಗೆ ಅವರ ಪಾಲಕರು ಜವಾಬ್ದಾರಿ ತೆಗೆದುಕೊಳ್ಳಬೇಕು. ಶಾಲೆಗಳನ್ನು ಆರಂಭಿಸಬೇಕು ಎಂದಿದ್ದಾರೆ. ಇದನ್ನೂ ಓದಿ:ಹೋಟೆಲಿನ ವಾಶ್ ರೂಮಿನಲ್ಲಿ ಅವಿತಿದ್ದ ನಟಿ ಸೋನಿಯಾ ವಶಕ್ಕೆ
ಸರ್ಕಾರಗಳು ಬದಲಾದಂತೆ ಶಿಕ್ಷಣ ನೀತಿ ಬದಲಾಗಬಾರದು. ಈಗಿನ ಹೊಸ ಶಿಕ್ಷಣ ನೀತಿ ಸರಿಯಿಲ್ಲ. ಹಿಂದಿನ ಶಿಕ್ಷಣ ನೀತಿಯೇ ಸರಿ ಇತ್ತು. ವರದಿಯನ್ನ ವಿಸ್ತೃತವಾಗಿ ಅಧ್ಯಯನ ಮಾಡಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪರಿಪೂರ್ಣತೆಯಿಂದ ಕೂಡಿಲ್ಲ. ನಾನು ನೂರು ದೇಶಗಳನ್ನು ತಿರುಗಿದ್ದೇನೆ. ಅಲ್ಲಿ ಸರ್ಕಾರ ಬದಲಾದಂತೆ ಶಿಕ್ಷಣ ನೀತಿಗಳು ಬದಲಾಗುವುದಿಲ್ಲ. ಸರ್ಕಾರ ಬದಲಾದಂತೆ ನೀತಿ ಬದಲಾದರೆ ಶಿಕ್ಷಣ ವ್ಯವಸ್ಥೆ ಸರಿಯಾಗುವುದಿಲ್ಲ. ನಮ್ಮ ದೇಶದಲ್ಲಿ ಮೂರು ಹಂತದ ಶಿಕ್ಷಣವೇ ಉತ್ತಮ. ಹಿಂದಿನ ಶಿಕ್ಷಣ ಪದ್ದತಿಯೇ ಉತ್ತಮವಾಗಿದೆ ಎಂದು ನುಡಿದಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ 2023ರ ಚುನಾವಣೆ ನನ್ನ ಕೊನೆಯ ಹೋರಾಟದ ಹೇಳಿಕೆ ಕುರಿತಂತೆ, ನಾನು ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಸಭಾಪತಿ ಆದವರು ರಾಜಕೀಯ ಮಾತನಾಡಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ:ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದ ಸರ್ಕಾರ – ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ?