ಗದಗ: ಸಮ್ಮಿಶ್ರ ಸರ್ಕಾರದ ಹೊಂದಾಣಿಕೆಯಲ್ಲಿ ಸಿಎಂ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಹೊಂದಾಣಿಕೆ ವೇಳೆ ತೊಂದರೆ ಸಹಜ. ಆದರೂ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಸಿಎಂ ಕುಮಾರಸ್ವಾಮಿ ಅವರು ಕಾರ್ಯಕ್ರಮವೊಂದರಲ್ಲಿ ಕಣ್ಣೀರಿಟ್ಟ ವಿಚಾರವಾಗಿ ಗದಗ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನನಗೂ ಕೂಡ ಮಂತ್ರಿಯಾಗುವ ಆಸೆ ಇತ್ತು. ಆದರೆ ಎಲ್ಲರಿಗೂ ಅವಕಾಶ ನೀಡುವ ದೃಷ್ಠಿಯಿಂದ ಹಿರಿಯರಾದ ನಮ್ಮಂಥವರ ತ್ಯಾಗದ ಅವಶ್ಯಕತೆ ಇದೆ. ಪಕ್ಷದ ಹಿತದೃಷ್ಠಿಯಿಂದ ಅಲ್ಲದಿದ್ದರು ರಾಜ್ಯದ ಹಿತಕ್ಕಾಗಿ ಸಭಾಪತಿಯಾಗಿದ್ದೇನೆ. ಸಭಾಪತಿಯಾಗಲು ನನಗೂ ಮನಸ್ಸಿರಲಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ನಾನು ಸಭಾಪತಿಯಾದೆ. ನಾನೂ ಶಿಕ್ಷಣ ಮಂತ್ರಿಯಾಗಬೇಕೆಂದು ಇಷ್ಟ ಪಟ್ಟಿದ್ದೆ. ಆದರೆ ಸಭಾಪತಿಯ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನನ್ನ ಕಾರ್ಯ ನಿರ್ವಹಿಸುತ್ತೆನೆ ಎಂದು ಹೇಳಿದರು.
ಇದೇ ವೇಳೆ ಮಹದಾಯಿ ಅಥವಾ ಉತ್ತರ ಕರ್ನಾಟಕ ನಿರ್ಲಕ್ಷ್ಯದ ಕುರಿತು ಮಾತನಾಡಿ, ನನ್ನ ಪರಿಮಿತಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಈ ಕುರಿತು ಸಚಿವರೊಂದಿಗೆ ಸಭೆ ಕರೆದು ಚರ್ಚಿಸಿದ್ದೇನೆ. ಆದಷ್ಟು ಬೇಗ ಸರ್ಕಾರಿ ಶಾಲೆಗಳ ದುರಸ್ಥಿ ಕಾರ್ಯ ಕೈಗೊಳ್ಳಲಾಗುವುದು. ಅಲ್ಲದೇ ಬೆಳಗಾವಿ ಸುವರ್ಣಸೌಧ ಸದ್ಬಳಕೆಗೆ ಸಿಎಂ ಹಾಗೂ ಸಚಿವರ ಸಭೆ ಕರೆದು ಚರ್ಚಿಸುತ್ತೇನೆ. ವರ್ಷಕ್ಕೆ 60 ದಿನಗಳಾದರು ಸುವರ್ಣಸೌಧದಲ್ಲಿ ಸಭೆ ನಡೆಯುವಂತೆ ಕ್ರಮ ಜರುಗಿಸಲಾಗುವುದು ಎಂದರು.