ಬೆಂಗಳೂರು: ಬಿಜೆಪಿಯಲ್ಲಿ ಕ್ಷಣಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಲಂಡನ್ ಪ್ರವಾಸವೂ ರದ್ದಾಗಿದ್ದು, ದಾವೋಸ್ ಪ್ರವಾಸವೂ ರದ್ದಾಗುವ ಸಾಧ್ಯತೆ ಇದೆ. ನಾಳೆ ಮಹತ್ವದ ನಿರ್ಧಾರ ಹೊರಬೀಳುವ ಬಗ್ಗೆ ನಾನಾ ಚರ್ಚೆಗಳು ಆಗುತ್ತಿದ್ದು, ಹೈಕಮಾಂಡ್ ಸಂದೇಶ ಕುತೂಹಲ ಹುಟ್ಟುಹಾಕಿದೆ.
ಬಿಜೆಪಿ ಹೈಕಮಾಂಡ್ನ ಆ ಸಂದೇಶ ನಾಳೆಯೇ ಬಂದು ಬಿಡುತ್ತೋ? ಮುಂದಿನ ವಾರ ಬರುತ್ತೋ ಎಂಬ ಬಗ್ಗೆ ಮೊದಲ ಸಾಲಿನ ನಾಯಕರಲ್ಲೇ ಗೊಂದಲ ಇದೆ. ಈ ನಡುವೆ ಸಿಎಂ ವಿದೇಶ ಪ್ರವಾಸದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಮೇ 18, 19 ರಂದು ತೆರಳಬೇಕಿದ್ದ ಲಂಡನ್ ಪ್ರವಾಸ ರದ್ದುಗೊಳಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ದಾವೋಸ್ ಪ್ರವಾಸಕ್ಕೂ ತೆರಳುವುದು ಅನುಮಾನವಾಗಿದೆ. ಸ್ವತಃ ಬಸವರಾಜ ಬೊಮ್ಮಾಯಿ ಅವರೇ ಮಾತನಾಡಿ, ದಾವೋಸ್ಗೆ ಹೋಗುವುದರ ಬಗ್ಗೆ ನಾಳೆ ತೀರ್ಮಾನ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮೇ 16ಕ್ಕೆ ಶೈಕ್ಷಣಿಕ ವರ್ಷ ಪ್ರಾರಂಭ – 30 ಸಾವಿರ ವಿದ್ಯಾರ್ಥಿಗಳ ಪೋಷಕರಿಗೆ ಪತ್ರ ಬರೆದ ರಮೇಶ್ ಜಾರಕಿಹೊಳಿ
ಇದೆಲ್ಲದರ ನಡುವೆ ಇವತ್ತು ದೆಹಲಿಯಿಂದ ವಾಪಸ್ ಬಂದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ಕೊಟ್ಟು ಮಾತುಕತೆ ನಡೆಸಿದರು. 20 ನಿಮಿಷ ಬಿಎಸ್ವೈ ಜೊತೆ ಚರ್ಚೆ ನಡೆಸಿದ ಸಿಎಂ ದೆಹಲಿ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು. ಅಮಿತ್ ಶಾ ಏನ್ ಹೇಳಿದ್ರು? ಏನ್ ಮಾಡ್ತಾರಂತೆ ಎಂದು ಸಿಎಂ ಬಳಿ ಯಡಿಯೂರಪ್ಪ ಮಾಹಿತಿ ಕೇಳಿದಾಗ, ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಏನ್ ಮಾಡ್ತೀವಿ ಅಂತಾ ನಾಲ್ಕೈದು ದಿನದಲ್ಲಿ ತಿಳಿಸ್ತೀವಿ ಅಂತಷ್ಟೇ ಅಮಿತ್ ಶಾ ಹೇಳಿದ್ದಾರೆ. ನನಗೂ ಸ್ಪಷ್ಟವಾದ ಸಂದೇಶ ಸಿಗಲಿಲ್ಲ. ಆದರೆ ಮಹತ್ವದ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ ಎಂದು ಸಿಎಂ ವಿವರಿಸಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ನಾಳೆ ಬೆಳಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಲಿದ್ದು, ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ ಕೂಡ ನಡೆಯಲಿದ್ದು, ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಒಟ್ಟಿನಲ್ಲಿ ಸಿಎಂ ವಿದೇಶ ಪ್ರವಾಸ ರದ್ದಾಗಿದ್ದು, ವಾರದೊಳಗೆ ಸಂದೇಶ ರವಾನೆ ಮಾಡ್ತೀವಿ ಅಂತಾ ಅಮಿತ್ ಶಾ ಹೇಳಿದ್ದಾರೆ. ಇದೆಲ್ಲವನ್ನೂ ನೋಡಿದಾಗ ಆ ಬದಲಾವಣೆ ಮುಂದಿನ ವಾರದೊಳಗೆ ಆಗಬಹುದಾ ಎಂಬ ಕುತೂಹಲ ಮನೆ ಮಾಡಿದೆ. ಇದನ್ನೂ ಓದಿ: ಲಿಡ್ಕರ್ ಮೂಲಕ ಸ್ವಯಂ ಉದ್ಯೋಗ ಒದಗಿಸಲು ಆದ್ಯತೆ: ಬೊಮ್ಮಾಯಿ