ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿ ಪ್ರವಾಸ ಮಾಡಲಿದ್ದಾರೆ.
ಮೂರು ದಿನಗಳ ದೆಹಲಿ ಪ್ರವಾಸಕ್ಕೆ ಯೋಜಿಸಿರುವ ಸಿಎಂ, ದೆಹಲಿಯಲ್ಲಿ ವರಿಷ್ಠರ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ. ಸಂಸದರ ಸಭೆ ಬಳಿಕ ವರಿಷ್ಠರನ್ನು ಸಿಎಂ ಭೇಟಿಯಾಗಬಹುದು ಎನ್ನಲಾಗಿದೆ. ಇದನ್ನೂ ಓದಿ: ಬೊಮ್ಮಾಯಿನೇ ಹಿಜಬ್ ಹಾಕಿದ್ದಾರೆ: ಸಿಎಂ ಇಬ್ರಾಹಿಂ
ದೆಹಲಿಗೆ ತೆರಳಲು ಸಿಎಂ ಬೊಮ್ಮಾಯಿ ಸಜ್ಜಾಗಿದ್ದಾರೆ. ಆದರೆ ಈವರೆಗೂ ಭೇಟಿಗೆ ಹೈಕಮಾಂಡ್ ಸಮಯ ನೀಡಿಲ್ಲ. ಹಲವು ಬಾರಿ ಪ್ರಯತ್ನಿಸಿದರೂ ಈವರೆಗೂ ವರಿಷ್ಠರು ಸಮಯ ನಿಗದಿ ಮಾಡಿಲ್ಲ. ಗೊಂದಲದ ನಡುವೆಯೂ ಸಿಎಂ ದೆಹಲಿಗೆ ತೆರಳುತ್ತಿದ್ದಾರೆ.
ಪಂಚರಾಜ್ಯಗಳ ಚುನಾವಣೆ ಸಮೀಪಿಸಿದ್ದು, ಮೊದಲೆರಡು ಹಂತಗಳ ಚುನಾವಣೆಯಲ್ಲಿ ವರಿಷ್ಠರು ಬ್ಯುಸಿಯಾಗಿದ್ದಾರೆ. ವರಿಷ್ಠರು ಉತ್ತರ ಪ್ರದೇಶ ಪ್ರಚಾರದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಭೇಟಿಗೆ ಇನ್ನೂ ಸಮಯ ನಿಗದಿ ಮಾಡಿಲ್ಲ. ಒಂದು ವೇಳೆ ಸಮಯ ಸಿಕ್ಕರೂ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡುವುದು ಅನುಮಾನ. ಚುನಾವಣೆ ಫಲಿತಾಂಶದ ಬಳಿಕ ಈ ಬಗ್ಗೆ ವಿಸ್ತೃತ ಚರ್ಚೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಷರಿಯತ್ತೇ ಮುಖ್ಯ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಪ್ರತಾಪ್ ಸಿಂಹ