– ಮ್ಯಾಜಿಸ್ಟ್ರೇಟ್ ತನಿಖೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿ
ನವದೆಹಲಿ: ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣದಿಂದ ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದ್ದಾರೆ.
ನವದೆಹಲಿಯಲ್ಲಿ (New Delhi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮದ್ದೂರಿನಲ್ಲಿ (Maddur) ನಡೆದ ಘಟನೆ ಪೂರ್ವನಿಯೋಜಿತ ಕೃತ್ಯವಾಗಿದೆ. ಮೊದಲೇ ಕಲ್ಲುಗಳನ್ನು ಶೇಖರಣೆ ಮಾಡಿ ಮೆರವಣಿಗೆ ವೇಳೆ ಕಲ್ಲೆಸಿದ್ದಾರೆ. ಅಲ್ಲಿ ಪೊಲೀಸ್ ಇಲಾಖೆ ಹಾಗೂ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಮ್ಯಾಜಿಸ್ಟ್ರೇಟ್ ತನಿಖೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಡಿಜೆ ಹಳ್ಳಿ, ಕೆಜೆಹಳ್ಳಿ ಗಲಭೆಕೋರರ ಮೇಲಿನ ಕೇಸ್ ಹಿಂಪಡೆದಿದ್ದಕ್ಕೆ ಬಾಲ ಬಿಚ್ಚಿದ್ದಾರೆ: ಪ್ರತಾಪ್ ಸಿಂಹ
ಪೊಲೀಸ್ ಇಲಾಖೆಯವರು ಸೂಕ್ತ ಬಂದೋಬಸ್ತ್ ಮಾಡಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಘಟನೆಯಲ್ಲಿ ಅಮಾಯಕರನ್ನು ಬಂಧಿಸಿದ್ದಾರೆ. ಇಂದು ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿದಾಗ ಅವರ ಮೇಲೆ ಪೊಲೀಸರು ವಿನಾಕಾರಣ ಲಾಠಿಚಾರ್ಜ್ ಮಾಡಿದ್ದಾರೆ. ಪೊಲೀಸರು ದಮನಕಾರಿ ನೀತಿ ಅನುಸರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮದ್ದೂರು ಘಟನೆ ನೋಡಿದ್ರೆ ರಾಜ್ಯದಲ್ಲಿ `ಮೊಘಲ್ ಪ್ರೇರಣೆಯ’ ಆಡಳಿತದಂತೆ ಭಾಸವಾಗುತ್ತಿದೆ – ಬಿವೈವಿ ಕಿಡಿ
ಸಂವಿಧಾನದ ಬಗ್ಗೆ ಬಹಳ ಮಾತನಾಡುವ ಸಿಎಂ ಸಿದ್ದರಾಮಯ್ಯ (Siddaramaiah) ಅವರೇ, ಸಂವಿಧಾನದಲ್ಲಿ ಎಲ್ಲ ಧರ್ಮೀಯರಿಗೆ ಅವರವರ ಧರ್ಮದ ಆಚರಣೆಗೆ ಅವಕಾಶ ಇದೆ. ಈದ್ಮಿಲಾದ್ ಹಬ್ಬವು ರಾಜ್ಯಾದ್ಯಂತ ಶಾಂತ ರೀತಿಯಿಂದ ನಡೆಯುತ್ತದೆ. ಆದರೆ, ಗಣೇಶನ ಹಬ್ಬದಲ್ಲಿ ಶಾಂತಿ ಕದಡಿ ಹಿಂಸಾತ್ಮಕವಾಗಿ ಮಾಡಬೇಕು ಎನ್ನುವ ಹುನ್ನಾರದಿಂದ ಈ ರೀತಿ ಮಾಡಿದ್ದಾರೆ ಆಕ್ರೋಶ ಹೊರಹಾಕಿದ್ದಾರೆ.
ಗಣೇಶನ ಹಬ್ಬದಲ್ಲಿ ಪೊಲೀಸರು ಪೂಜೆಗೆ, ಮೆರವಣಿಗೆಗೆ, ಸೌಂಡ್ ಸಿಸ್ಟಮ್ಗೆ ಎಲ್ಲದಕ್ಕೂ ನಿರ್ಬಂಧ ಹೇರುತ್ತಾರೆ. ಇದು ಸಂವಿಧಾನ ವಿರೋಧಿ ಅಲ್ಲವೇ? ಪೊಲೀಸರು ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಚರಣೆಗೆ ಅವಕಾಶ ನೀಡಬಹುದು. ಶಿವಮೊಗ್ಗ, ಚಿತ್ರದುರ್ಗ, ಉತ್ತರ ಕರ್ನಾಟಕ ಎಲ್ಲ ಕಡೆ ಶಾಂತ ರೀತಿಯಾಗಿ ಗಣೇಶೋತ್ಸವ ಮೆರವಣಿಗೆ ನಡೆದಿದೆ. ಮಂಡ್ಯದಲ್ಲಿ ಯಾಕೆ ಮಾಡಲು ಆಗಲಿಲ್ಲ. ಮಂಡ್ಯದಲ್ಲಿ ಪೊಲೀಸರು ಮತ್ತು ಸರ್ಕಾರದ ವೈಫಲ್ಯವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 21 ಜನರನ್ನು ಬಂಧಿಸಲಾಗಿದೆ, ಮಸೀದಿ ಕಡೆಯಿಂದ ಕಲ್ಲು ಎಸೆದ ಬಗ್ಗೆ ಮಾಹಿತಿ ಇದೆ: ಚಲುವರಾಯಸ್ವಾಮಿ
ಘಟನೆ ಬಗ್ಗೆ ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆ
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಘಟನೆಯನ್ನು ಬಹಳ ಹಗುರವಾಗಿ ತೆಗೆದುಕೊಂಡು, ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಕಾನೂನು ಸುವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ, ಅನವಶ್ಯಕವಾಗಿ ಬಿಜೆಪಿ ಮೇಲೆ ಆರೋಪ ಮಾಡುವುದನ್ನು ಬಿಟ್ಟು ನಿಷ್ಪಕ್ಷಪಾತವಾಗಿ ತಮ್ಮ ಕರ್ತವ್ಯ ಮಾಡುವುದನ್ನು ಕಲಿಯಲಿ, ಓಲೈಕೆ ರಾಜಕಾರಣ ಮಾಡುವುದರ ಪರಿಣಾಮದಿಂದಾಗಿ ಈ ಘಟನೆ ನಡೆದಿದೆ ಎಂದಿದ್ದಾರೆ.
ಸಮಾಜ ಘಾತುಕ ಶಕ್ತಿಗಳು ಏನು ಮಾಡಿದರೂ ನಡೆಯುತ್ತದೆ ಎನ್ನುವ ಭರವಸೆಯನ್ನು ಈ ಸರ್ಕಾರ ನೀಡಿದೆ. ಹೀಗಾಗಿ, ಕಾನೂನು ಮತ್ತು ಪೊಲೀಸರ ಭಯ ಇಲ್ಲದೆ ಅವರು ನಿರ್ಭೀತಿಯಿಂದ ಹಿಂಸಾತ್ಮಕ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ. ಮಂಡ್ಯದಲ್ಲಿ ಶಾಂತಿ ನೆಲೆಸಬೇಕು. ಎಲ್ಲ ಧರ್ಮೀಯರು ತಮ್ಮ ಹಬ್ಬಗಳ ಆಚರಣೆಗೆ ಅವಕಾಶ ದೊರೆಯಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಳೆ ಮದ್ದೂರು ಸ್ವಯಂ ಪ್ರೇರಿತ ಬಂದ್ಗೆ ಕರೆ – ಹಿಂದೂ ಮುಖಂಡರ ತೀರ್ಮಾನ
ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಗೆ ಪ್ರತಿಪಕ್ಷಗಳ ಮೇಲೆ ಆರೋಪ ಮಾಡುವುದು ಸುಲಭ. ಅನ್ಯಾಯ ಆದವರಿಗೆ ನ್ಯಾಯ ಕೊಡಿಸಲು ಹೋರಾಡುವುದು ಪ್ರತಿಪಕ್ಷಗಳ ಕರ್ತವ್ಯ, ನಾವು ನಮ್ಮ ಕರ್ತವ್ಯ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕೆಲಸ. ಅವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ ಕಿಡಿಕಾರಿದ್ದಾರೆ.
ಈಗ ಚುನಾವಣೆ ನಡೆದ್ರೆ ಕಾಂಗ್ರೆಸ್ ಮನೆಗೆ ಹೋಗುತ್ತೆ
ಸಿಎಂ ಅವರು ಪಿಎಫ್ಐ ಹಾಗೂ ಎಸ್ಡಿಪಿ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದರ ಪರಿಣಾಮವಾಗಿ ಮೈಸೂರಿನಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿಯಾಯಿತು. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಕೋರರ ಕೇಸ್ ವಾಪಸ್ ಪಡೆಯಲು ಪ್ರಯತ್ನಿಸಿದರು. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಕೇಸ್ ವಾಪಸ್ ಪಡೆದರು. ಇಂತಹ ಸಮಾಜ ಘಾತುಕ ಹಾಗೂ ಶಾಂತಿ ಕದಡುವ ಶಕ್ತಿಗಳ ವಿರುದ್ಧದ ಪ್ರಕರಣ ವಾಪಸ್ ಪಡೆಯುವುದು ಕೂಡ ಒಂದು ರೀತಿ ಪ್ರಚೋದನೆ ಆಗಿದೆ. ಈ ಘಟನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ. ರಾಜ್ಯದಲ್ಲಿ ಈಗಲೇ ಚುನಾವಣೆ ನಡೆದರೆ ಕಾಂಗ್ರೆಸ್ ಮನೆಗೆ ಹೋಗುತ್ತದೆ. ಕಾಂಗ್ರೆಸ್ನವರಿಗೆ ಜನರನ್ನು ಎದುರಿಸುವ ಶಕ್ತಿಯಿಲ್ಲ ಎಂದಿದ್ದಾರೆ.