ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು (S Nijalingappa) ಆಡಳಿತದ ಭದ್ರ ಬುನಾದಿಯನ್ನು ಹಾಕಿ ಜನಪರವಾದ ಆಡಳಿತ ಮಾಡಲು ನಾಂದಿ ಹಾಡಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್. ನಿಜಲಿಂಗಪ್ಪ ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್.ನಿಜಲಿಂಗಪ್ಪ ಅವರು ಕನ್ನಡ ನಾಡಿನ ಪುತ್ರ. ಇಡೀ ನಾಡಿಗಾಗಿ ತಮ್ಮ ಜೀವವನ್ನು ಮೀಸಲಿಟ್ಟು ಕನ್ನಡ, ಕನ್ನಡ ಭಾಷೆಗೆ ಮಾಡಿರುವ ಕೆಲಸ ಕರ್ನಾಟಕವಾಗಲು ಕಾರಣೀಭೂತವಾಗಿದೆ. ತತ್ವ, ಆದರ್ಶ ಮೌಲ್ಯಾಧಾರಿತ ರಾಜಕಾರಣ, ಕರ್ನಾಟಕದಲ್ಲಿ ಮಾಡಿದರು ಎಂದರು.
ಭಾರತದಲ್ಲಿ ಅವರ ಖ್ಯಾತಿ, ಪ್ರಭಾವ ಇತ್ತು. ಸಂವಿಧಾನ ರಚನಾ ಸಮಿತಿಯಿಂದ ಹಿಡಿದು ಎ.ಐ.ಸಿ.ಸಿ ಅಧ್ಯಕ್ಷರಾಗುವವರೆಗೂ ಭಾರತದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಡಳಿದಲ್ಲಿ ಸುಧಾರಣೆಗೆ ಮಹತ್ವ ನೀಡಿ, ಆಡಳಿತ ಸುಧಾರಣೆಯನ್ನು ಪ್ರಜಾಪ್ರಭುತ್ವ ಆಗತಾನೆ ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ ಜನಪರವಾದ, ಜನರ ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವವನ್ನು ನೀಡಿದ್ದಾರೆ ಎಂದರು.
ಪ್ರಾಮಾಣಿಕ ರಾಜಕಾರಣಿ: ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ನಾಟಕದ ಸೇವೆಯನ್ನು ಮಾಡಿದವರು. ನೀರಾವರಿಗೆ ಬಹಳಷ್ಟು ಒತ್ತು ನೀಡಿದವರು. ಇಂದು ನಾವು ಕಾಣುತ್ತಿರುವ ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶಗಳು ಅವರ ಕಲ್ಪನೆ ಹಾಗೂ ಕ್ರಿಯಾಯೋಜನೆಗಳಾಗಿವೆ. ಕರ್ನಾಟಕಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಮೌಲ್ಯಾಧಾರಿತ ರಾಜಕಾರಣ ಮಾಡಿದ್ದರು. ಮನಸ್ಸು ಮಾಡಿದ್ದರೆ, ಭಾರತದ ರಾಷ್ಟ್ರಪತಿಗಳಾಗಬಹುದಿತ್ತು. ಆದರೆ ಅವರು ಅದನ್ನು ಒಪ್ಪಲಿಲ್ಲ. ಎಂದಿಗೂ ಅಧಿಕಾರದ ಹಿಂದೆ ಹೋಗಲಿಲ್ಲ. ಅಧಿಕಾರ ಅವರ ಹಿಂದೆ ಬಂದಿತ್ತು. ಎಸ್.ಆರ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಿದ್ದಾಗ ಬೆಂಗಳೂರಿಗೆ ಬನ್ನಿ ಎಂದಾಗಲೂ ಅವರು ಒಪ್ಪಲಿಲ್ಲ. ಅತ್ಯಂತ ಪ್ರಾಮಾಣಿಕ ರಾಜಕಾರಣಿಯಾದ ಅವರು ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು. ಇದನ್ನೂ ಓದಿ: ಮೋದಿ ತೊಟ್ಟ ಪೇಟ ಖರೀದಿಸಿದ ಮೈಸೂರಿನ ಅಭಿಮಾನಿ
ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ: ಸಿ.ಸೋಮಶೇಖರ್ ಮತ್ತಿತರರು ಉಪಸ್ಥಿತಿತರಿದ್ದರು. ಇದನ್ನೂ ಓದಿ: ಆಪ್ ಸೇರಿದ್ದ ಕೆಲವೇ ಗಂಟೆಯಲ್ಲಿ ಕಾಂಗ್ರೆಸ್ ವಾಪಸ್ಸಾದ ಮುಖಂಡರು