ಹುಬ್ಬಳ್ಳಿ: ಹನುಮ ಹುಟ್ಟಿದ್ದು ನಮ್ಮ ಕರ್ನಾಟಕದಲ್ಲಿ, ಆಂಜನೇಯಸ್ವಾಮಿ ಕನ್ನಡ ನಾಡಿನ ಪುತ್ರ. ಹೀಗಾಗಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಲಾಗಿದೆ. ಅಲ್ಲಿ ರೂಪ್ ವೇ, ಗಾಳಿ ಗೋಪುರ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಧಾರವತಿ ಹನುಮಂತ ದೇವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಹನುಮಾನ್ ಚಾಲೀಸಾ ಪಠಿಸಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಶ್ರದ್ಧೆ ಭಕ್ತಿಯಿಂದ ಆರಾಧನೆ ಮಾಡಿದರೆ ಹನುಮಂತ ಒಲಿಯುತ್ತಾನೆ. ಬೇಡಿಕೊಂಡವರಿಗೆ ಫಲ ಸಿಗುತ್ತದೆ ಎಂದು ತಿಳಿಸಿದರು.
ಸಣ್ಣದಾಗಿದ್ದ ಹನುಮಂತ ದೇವಸ್ಥಾನವನ್ನು ದೊಡ್ಡದಾಗಿ ನಿರ್ಮಾಣ ಮಾಡಿರುವುದು ಹೆಮ್ಮೆ ಅನಿಸುತ್ತದೆ. ಗೋಕುಲದ ಪ್ರತಿಯೊಂದು ಮನೆ ಮನೆಗೆ ಹೋಗಿದ್ದೇನೆ. ಸದಾಕಾಲ ಪ್ರೀತಿ ವಿಶ್ವಾಸ ಕೊಟ್ಟಿದ್ದೀರಿ. ಕಿರ್ಲೋಸ್ಕರ್ ಕಂಪನಿ ಬಂದ ಮೇಲೆ ಪ್ರತಿಯೊಬ್ಬರೂ ಕೆಲಸ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ದಕ್ಷ, ಜನಪರ ಆಡಳಿತವನ್ನು ಸರ್ಕಾರ ಮಾಡ್ತಿದೆ, ಆಡಳಿತ ವಿರೋಧಿಗಳಿಗೆ ಅದೇ ಉತ್ತರ: ಬೊಮ್ಮಾಯಿ
ಆಗ ಭೂಮಿ ಜಾಸ್ತಿ ಇದ್ದವರು ಇಡೀ ಜಗತ್ತನ್ನು ಆಳುತ್ತಿದ್ದರು. ಹಣವಿದ್ದ ಇಂಗ್ಲೆಂಡ್ ದೇಶ ಕೂಡ ಇಡೀ ಜಗತ್ತನ್ನು ಆಳಿದೆ. ಆದರೆ ಇಂದು ಜ್ಞಾನ ಇರುವವರು ವಿಶ್ವವನ್ನು ಆಳುತ್ತಿದ್ದಾರೆ. ಇದರಿಂದಾಗಿ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
ರಾಜ್ಯಕ್ಕೆ ಜನೋಪಯೋಗಿ ಶಾಸಕರು ಬೇಕಾಗಿದ್ದಾರೆ ಎಂದ ಅವರು ಪ್ರಹ್ಲಾದ್ ಜೋಶಿ ಅವರ ಶ್ರಮದಿಂದ ಐಐಐಟಿ, ಬೈಪಾಸ್, ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ಜಾರಿಗೆ ಬಂದಿವೆ. ಹೀಗೆ ರಾಜ್ಯ, ದೇಶ ಕಟ್ಟುವಲ್ಲಿ ನಿರತರಾಗಬೇಕು ಎಂದು ಹೇಳಿದರು. ಇದನ್ನೂ ಓದಿ: ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ, ಕಾಂಗ್ರೆಸ್ ವಂಶವಾದವನ್ನು ಮಾತ್ರ ಬಿಡಲ್ಲ: ಬಿಜೆಪಿ