ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯಲ್ಲಿ ಮತದಾರರು ವಿರೋಧ ಪಕ್ಷವನ್ನು ಧೂಳಿಪಟ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯಗಳ ಫಲಿತಾಂಶ ಬಂದಿದೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿ ಸಾಧಿಸಿ ಮತ್ತೊಮ್ಮೆ ಸರ್ಕಾರ ರಚಿಸಲು ಜನರ ಆಶೀರ್ವಾದ ಪಡೆದುಕೊಂಡಿದೆ. ಅದರಲ್ಲೂ ವಿಶೇಷವಾಗಿ ಉತ್ತರಪ್ರದೇಶದಲ್ಲಿ ಅತ್ಯಂತ ಹೆಚ್ಚು ಸ್ಥಾನ ಪಡೆದುಕೊಂಡು ಮತ್ತೊಮ್ಮೆ ಮೋದಿ ಯೋಗಿ ನೇತೃತ್ವದಲ್ಲಿ ಡಬಲ್ ಇಂಜಿನ್ ಸರ್ಕಾರ ಮುನ್ನಡೆಸುವಂತ ಕಾರ್ಯ ಮಾಡುತ್ತದೆ ಎಂದರು. ಇದನ್ನೂ ಓದಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ಗೆ ಸೋಲು
ಈ ಹಿನ್ನೆಲೆಯಲ್ಲಿ 4 ರಾಜ್ಯದ ಮತದಾರರಿಗೆ, ಮೋದಿ, ಜೆ.ಪಿ. ನಡ್ಡಾ, ಅಮಿತ್ ಶಾ, ಆಯಾ ರಾಜ್ಯದ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೋದಿ ಅವರ ನಾಯಕತ್ವದಲ್ಲಿರುವ ಯೋಜನೆಗಳಾದ ಬಡವರ, ಹೆಣ್ಣು ಮಕ್ಕಳ ಹಾಗೂ ರೈತರ ಪರವಾಗಿ ಇರುವ ಕಾರ್ಯಕ್ರಮಗಳು ಮತ್ತು ಆರ್ಥಿಕ ಸಬಲೀಕರಣ, ಕೋವಿಡ್ ನಿರ್ವಹಣೆಯ ಕೆಲಸವನ್ನು ಜನರು ಮೆಚ್ಚಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬಿಜೆಪಿಗೆ ಗೆಲುವು – 4 ದಾಖಲೆ ಬರೆದ ಸಿಎಂ ಯೋಗಿ
ಮುಂದಿನ ದಿನಗಳಲ್ಲಿ ನಮ್ಮ ನಾಯಕರು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಪಣ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಅವರ ನವಭಾರತ ನಿರ್ಮಾಣದ ಕನಸು ನನಸಾಗುತ್ತದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ಪ್ರಯಾಸ್ ಇದು ಅಕ್ಷರಶಃ ನಮ್ಮ ದೇಶದಲ್ಲಿ ಸಾಕಾರಗೊಳ್ಳುತ್ತಿದೆ. ಆತ್ಮ ನಿರ್ಭರ್ ಕನಸು ನನಸು ಮಾಡುತ್ತೇವೆ ಎಂದರು.