ಬೆಂಗಳೂರು: ಪೊಲೀಸರು ತನಿಖೆ ನಡೆಸಿದ ರೀತಿಯಿಂದಲೇ ಆರೋಪಿ ಶರಣಾಗಿದ್ದಾನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಆರೋಪಿಯ ವಿರುದ್ಧ ಸಿಕ್ಕ ಸಿಸಿಟಿವಿ ದೃಶ್ಯಾವಳಿ, ಆಟೋ ಹಾಗೂ ಇತರೆ ಸಾಕ್ಷ್ಯಗಳ ಜಾಲವನ್ನು ಹುಡುಕಿ ಹೊರಟಾಗ ಆದಿತ್ಯ ರಾವ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಉಡುಪಿಯಲ್ಲಿರುವ ಆತನ ಮನೆಗೆ ಹೋಗಿ ತಂದೆ, ತಾಯಿ ಹಾಗೂ ಕುಟುಂಬಸ್ಥರ ಬಳಿ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಆ ಬಳಿಕ ಮೂರು ತನಿಖಾ ತಂಡ ರಚಿಸಿ ಈ ಸಂಬಂಧ ತನಿಖೆ ನಡೆಸಲಾಗುತ್ತಿತ್ತು. ಆದರೆ ಆರೋಪಿ ಉಡುಪಿಯಿಂದ ಬೆಂಗಳೂರಿಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಈ ಕೃತ್ಯವೆಸಗಲು ಏನು ಕಾರಣ? ಆತನ ಹಿಂದೆ ಯಾರಿದ್ದಾರೆ? ಎನ್ನುವ ಎಲ್ಲಾ ಮಾಹಿತಿ ತನಿಖೆ ಬಳಿಕ ತಿಳಿದು ಬರಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಇದನ್ನೂ ಓದಿ: ಹೌದು, ಬಾಂಬ್ ಇಟ್ಟಿದ್ದು ನಾನೇ – ತಪ್ಪೊಪ್ಪಿಕೊಂಡ ಆದಿತ್ಯ ರಾವ್
ಈ ಪ್ರಕರಣದಲ್ಲಿ ನಮ್ಮ ಪೊಲೀಸರು ಕ್ಷಿಪ್ರವಾಗಿ ಕೆಲಸ ಮಾಡಿರುವುದು ಅವರ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಹೀಗಾಗಿ ಅನಾವಶ್ಯಕವಾಗಿ ಪೊಲೀಸರ ಬಗ್ಗೆ ಟೀಕೆ ಮಾಡಿ ಅವರ ನೈತಿಕತೆಯನ್ನು ಕುಗ್ಗಿಸುವ ಕೆಲಸವನ್ನು ಯಾರು ಮಾಡಬಾರದು. ಪೊಲೀಸರು ತನಿಖೆ ನಡೆಸಿದ ರೀತಿಯಿಂದಲೇ ಆರೋಪಿ ಶರಣಾಗಿದ್ದಾನೆ. ಅದಕ್ಕೆ ನಾವು ಮೊದಲು ಆರೋಪಿ ಇಂತಹ ಸಂಘಟನೆಗೆ ಸೇರಿದವರು ಅಥವಾ ಇಂತಹ ವ್ಯಕ್ತಿ ಎಂದು ಹೇಳಿರಲಿಲ್ಲ. ಯಾರೇ ಆರೋಪಿ ಇದ್ದರು ಅವನನ್ನು ಕಂಡು ಹಿಡಿಯುತ್ತೇನೆ ಎಂದಿದ್ದೆವು. ಆ ಪ್ರಕಾರ ಪೊಲೀಸರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಗೃಹ ಸಚಿವರು ಪೊಲೀಸರನ್ನು ಶ್ಲಾಘಿಸಿದರು. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಸಿಗದ್ದಕ್ಕೆ ಬೆದರಿಕೆ ಕರೆ ಮಾಡಿದ್ದ ಬಾಂಬರ್ ಈಗ ಬಾಂಬ್ ಇಟ್ಟ
ಆರೋಪಿ ಬೇರೆ ಬೇರೆ ಮಾರ್ಗದಿಂದ ಬೆಂಗಳೂರಿಗೆ ಬಂದಿದ್ದಾನೆ. ಸರ್ಕಾರಿ ಬಸ್ ಅಥವಾ ಸಾಮಾನ್ಯ ಬಸ್ಗಳಲ್ಲಿ ಆತ ಬೆಂಗಳೂರಿಗೆ ಬಂದಿಲ್ಲ. ಪೊಲೀಸರ ಕಣ್ತಪ್ಪಿಸಿ ರಾತ್ರೋರಾತ್ರಿ ಬೆಂಗಳೂರಿಗೆ ಬಂದಿದ್ದಾನೆ. ಉಗ್ರ ಸಂಘಟನೆ ಜೊತೆ ಆರೋಪಿಗೆ ಲಿಂಕ್ ಇದೆಯೇ? ಇಲ್ಲವಾ? ಎನ್ನೋದು ಮುಂದಿನ ತನಿಖೆಯಲ್ಲಿ ಪತ್ತೆಯಾಗುತ್ತೆ ಎಂದರು.
ಸಾಮಾನ್ಯವಾಗಿ ಬಾಂಬ್ ಪತ್ತೆ, ಬ್ಲಾಸ್ಟ್ ಪ್ರಕರಣ ನಡೆದಾಗ ಕೇಂದ್ರ ಸರ್ಕಾರಕ್ಕೆ ಮಾಹಿತಿ ತಲುಪಿರುತ್ತದೆ. ಈಗಾಗಲೇ ಎನ್ಎಸ್ಜಿ(ರಾಷ್ಟ್ರೀಯ ಭದ್ರತಾ ಗಾರ್ಡ್) ಸಿಬ್ಬಂದಿ ಮಂಗಳೂರು ಏರ್ಪೋರ್ಟ್ ಹಾಗೂ ಇತರೆ ಪ್ರದೇಶಗಳಲ್ಲಿ ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ತನಿಖೆ ಮೇಲೆ ಏನು ಬಯಲಾಗುತ್ತದೋ ಅದರ ಆಧಾರದ ಮೇಲೆ ಕ್ರಮ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು ಮಾಹಿತಿ ನೀಡಿದರು. ಇದನ್ನೂ ಓದಿ: ಮಂಗ್ಳೂರು ಸ್ಫೋಟ ಪ್ರಕರಣ- ಪಬ್ಲಿಕ್ ಟಿವಿಗೆ ಶಂಕಿತ ಉಗ್ರನ ವಿಡಿಯೋಗಳು ಲಭ್ಯ
ಆರೋಪಿಯು ಪದವಿಧರನಾಗಿದ್ದು, ಮಂಗಳೂರಿನಲ್ಲಿ ಕೆಲಸ ಪಡೆಯುವಲ್ಲಿ ವಿಫಲವಾಗಿದ್ದನು. ಈ ಹಿಂದೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಆಗಿ ಕೆಲಸಕ್ಕೆ ಸೇರಲು ಪ್ರಯತ್ನಿಸಿದ್ದ. ಮುಂಜಾನೆ ಆರೋಪಿ ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಲಿದೆ.