ಬೆಂಗಳೂರು: ಕಾಂಗ್ರೆಸ್ ಅವರು ಅಧಿಕಾರಕ್ಕೆ ಬರೋದಿಲ್ಲ. ಇಲ್ಲದೆ ಇರೋ ಸೀಟಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಗುದ್ದಾಡುತ್ತಿದ್ದಾರೆ ಅಂತ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಯವರು ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ಲೇವಡಿ ಮಾಡಿದ್ದಾರೆ.
ನಾನು ಸಿಎಂ ಆಕಾಂಕ್ಷಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ. ಇಲ್ಲದೆ ಇರೋ ಸೀಟಿಗೆ ಇಬ್ಬರು ಗುದ್ದಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಅಧಿಕಾರಕ್ಕಾಗಿ, ಸಿಎಂ ಆಗೋಕೆ ಮಾತ್ರ ಈ ಹೋರಾಟ ನಡೆಯುತ್ತಿದೆ ಅಂತ ಕಿಡಿಕಾರಿದರು.
ಜನರಿಗೆ ಕಾಂಗ್ರೆಸ್ (Congress) ಏನು ಒಳ್ಳೆಯದು ಮಾಡಿಲ್ಲ. ಸಿದ್ದರಾಮಯ್ಯ ಹೇಳಿಕೆಯಲ್ಲಿ ಆಶ್ಚರ್ಯ ಏನೂ ಇಲ್ಲ. ಕಾಂಗ್ರೆಸ್ ಅಂತರಂಗದಲ್ಲಿ ನಡೆಯೋ ಪ್ರತಿಬಿಂಬ ಅದು. ಡಿಕೆ ಶಿವಕುಮಾರ್ ನಾನೇ ಸಿಎಂ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ಆಶೀರ್ವಾದ ಮಾಡಿ ಅಂತ ಹೇಳ್ತಿದ್ದಾರೆ. ಇನ್ನೊಂದು ಕಡೆ ಸಿದ್ದರಾಮಯ್ಯ ನಾನೇ ಸಿಎಂ ಅಂತ ಹೇಳ್ತಿದ್ದಾರೆ. ಮುಖ್ಯಮಂತ್ರಿ ಮಾಡೋರು ಜನ. ಜನರ ಮನಸ್ಸಿನಲ್ಲಿ ಇವರು ಇಬ್ಬರು ಇಲ್ಲ ಅಂತ ಲೇವಡಿ ಮಾಡಿದ್ರು. ಇದನ್ನೂ ಓದಿ: ನನ್ನ ಹೇಳಿಕೆ ತಿರುಚಿದ್ದಾರೆ: ಡಿಕೆಶಿನ ಹೈಕಮಾಂಡ್ ಸಿಎಂ ಮಾಡಲ್ಲ ಹೇಳಿಕೆಗೆ ಸಿದ್ದು ಸ್ಪಷ್ಟನೆ
ಡಿ.ಕೆ ಶಿವಕುಮಾರ್ ಗೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅಂತ ಗೊತ್ತಿದೆ. ಜನರನ್ನ ಮಾತಿನಿಂದ ಮರಳು ಮಾಡೋ ಪ್ರಯತ್ನ ಕಾಂಗ್ರೆಸ್ ಮಾಡ್ತಿದೆ. ಇಂತಹ ಬಹಳ ಜನ ನಾಯಕರನ್ನ ಕರ್ನಾಟಕದ ಜನ ನೋಡಿದ್ದಾರೆ. ಕಾಂಗ್ರೆಸ್ ನಲ್ಲಿ ಆಂತರಿಕವಾಗಿ ಬಹಳಷ್ಟು ನಡೆದಿದೆ. ಅದು ಏನ್ ನಡೆದಿದೆ ಅಂತ ಅವರಿಗೆ ಗೊತ್ತು. ಇಬ್ಬರು ಕೂಡಾ ಕನಸಿನಲ್ಲಿ ಸಿಎಂ ಸ್ಥಾನವನ್ನ ಪಡೆಯೋಕೆ ಕನಸು ಕಾಣ್ತಿದ್ದಾರೆ. ಅವರ ಕನಸು ನನಸಾಗದೇ ಇರೋ ಕನಸು ಅದು ಎಂದು ಭವಿಷ್ಯ ನುಡಿದರು.
ಜನರ ಪಲ್ಸ್ ಏನ್ ಇದೆಯೋ ನಮ್ಮ ಶಾಸಕರ ಪಲ್ಸ್ ಅದೇ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಅವರು, ಜನರ ಪಲ್ಸ್ ಏನಿದೆ ಅಂತ ಹೇಳೋಕೆ ಸಿದ್ದರಾಮಯ್ಯ ಭವಿಷ್ಯಗಾರರಲ್ಲ. ಫಲಿತಾಂಶ ಬಂದಾಗ ಜನರ ಪಲ್ಸ್ ಗೊತ್ತಾಗುತ್ತೆ. ಜನರ ಬೆಂಬಲ ಇದ್ದರೆ ಮಾತ್ರ ಶಾಸಕರು ಆಗೋಕೆ ಸಾಧ್ಯ ಎಂದರು.