ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಈ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ. ಸಿದ್ದರಾಮಯ್ಯ ಅತ್ಯಂತ ಕಷ್ಟದಲ್ಲಿ ಇದ್ದಾಗ ಅವರ ಕೈಯನ್ನು ಹಿಡಿದವರು ಬಾಗಲಕೋಟೆಯ ಬಾದಾಮಿ ಜನರು. ಕಷ್ಟ ಕಾಲದಲ್ಲಿ ಕೈ ಹಿಡಿಬೇಕಾದರೆ ಬಾದಾಮಿ ಬೇಕಾಗಿತ್ತು. ಈಗ ಮುಖ್ಯಮಂತ್ರಿ ಆದ ಮೇಲೆ ಬಾದಾಮಿ, ಬಾಗಲಕೋಟೆ ಬೇಕಾಗಿಲ್ಲ. ಇಂಥವರಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
ಬಾಗಲಕೋಟೆಯ (Bagalakote) ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ಬಾಗಲಕೋಟೆ ಜಿಲ್ಲೆಯ ರಾಂಪೂರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚನೆಯ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಇದನ್ನೂ ಓದಿ: ಗೌರವ ಡಾಕ್ಟರೇಟ್ ನನಗೆ ಬೇಡ, ಬೇರೆ ಸಾಧಕರಿಗೆ ನೀಡಿ: ಹಾವೇರಿ ವಿವಿಗೆ ಬೊಮ್ಮಾಯಿ ಮನವಿ
ಕರ್ನಾಟಕದಾದ್ಯಂತ ಬದಲಾವಣೆಯ ಗಾಳಿ ಬೀಸುತ್ತಿದೆ. ಬದಲಾವಣೆಯನ್ನು ಜನರು ಬಯಸುತ್ತಿದ್ದಾರೆ. ಬದಲಾವಣೆಯ ಸೂಚನೆ ಕೊಡುವ ಮೊದಲ ಅವಕಾಶ ಬಾಗಲಕೋಟೆ ಜನರಿಗಿದೆ. ಇಡೀ ಬಾಗಲಕೋಟೆ ಮುಳುಗಿದ ಸಂದರ್ಭದಲ್ಲಿ ಯುಕೆಪಿ ಮೊದಲನೆ ಹಂತ, ಎರಡನೇ ಹಂತದಲ್ಲಿ ಹಣ ಕೊಟ್ಟಿದ್ದು ಕಾಂಗ್ರೆಸ್ಸೇತರ ಸರ್ಕಾರ ಅದು ಜನತಾದಳ ದೇವೇಗೌಡರು ಇದ್ದಾಗ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ಎಂದು ಹೇಳಿದರು.

2009 ರಲ್ಲಿ ಬಾಗಲಕೋಟೆ ನವ ನಿರ್ಮಾಣಕ್ಕೆ 700 ಕೋಟಿ ರೂ. ನಮ್ಮ ಸರ್ಕಾರ ಕೊಟ್ಟಿದೆ. ನಾನು ಸಿಎಂ ಇದ್ದಾಗ 2022 ರಲ್ಲಿ 2300 ಕೋಟಿ ರೂ. ಬಾಗಲಕೋಟೆ ಅಭಿವೃದ್ಧಿಗೆ ಕೊಟ್ಟಿದ್ದೇನೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಪ್ರತಿಯೊಂದು ಗ್ರಾಮದ ಅಭಿವೃದ್ಧಿ ಆಗಿದೆ. ಕಳೆದ ಮೂರು ವರ್ಷದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ಸಿಎಂಗೆ ಒಂದು ಹಳ್ಳಿಗೆ ಚುನಾವಣಾ ಪ್ರಚಾರಕ್ಕೆ ಹಾಕಿದ್ದರು. ಅಲ್ಲಿ ರಸ್ತೆ ಸರಿ ಇಲ್ಲ ಅಂತ ಜನ ಬೈಯುತ್ತಾರೆ ಅಂತ ಪ್ರಚಾರಕ್ಕೆ ಹೋಗಿಲ್ಲ. ಮುಖ್ಯಮಂತ್ರಿಗಳು ಹೋಗುತ್ತಿರುವ ಪರಿಸ್ಥಿತಿ ಇವತ್ತಿನ ರಸ್ತೆಗಳ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಈ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ. ಸಿದ್ದರಾಮಯ್ಯ ಅತ್ಯಂತ ಕಷ್ಟದಲ್ಲಿ ಇದ್ದಾಗ ಅವರ ಕೈಯನ್ನು ಹಿಡಿದವರು ಬಾಗಲಕೋಟೆಯ ಬಾದಾಮಿ ಜನರು. ಚಾಮುಂಡೇಶ್ವರಿಯಲ್ಲಿ ಮುಖ್ಯಮಂತ್ರಿ ಆಗಿ ಮೂವತ್ತು ಸಾವಿರ ಮತಗಳಿಂದ ಸಿದ್ದರಾಮಯ್ಯ ಸೋತಿದ್ದಾರೆ. ಆದರೆ, ಬಾದಾಮಿಯ ಜನ ಅವರ ಕೈ ಹಿಡಿದರು. ಹೀಗಾಗಿ, ಅವರ ರಾಜಕೀಯ ಮುಂದುವರೆಯಿತು. ಆದರೆ, ಇವರು ಅಲ್ಲಿ ಯಾವುದೇ ರೀತಿಯ ಕೆಲಸ ಮಾಡಲಿಲ್ಲ. ಇಲ್ಲಿ ಬಂದು ನೋಡಲಿಲ್ಲ. ಕೆರೂರು ಏತ ನೀರಾವರಿ ಯೋಜನೆಯನ್ನು ನಾವು ಮಾಡಬೇಕಾಯಿತು. ಗೋವಿಂದ ಕಾರಜೋಳ ನೀರಾವರಿ ಸಚಿವರಿದ್ದರು. ನಾನು ಸಿಎಂ ಇದ್ದಾಗ 700 ಕೋಟಿ ಕೊಟ್ಟು ಏತ ನೀರಾವರಿ ಯೋಜನೆ ಮಾಡಿ ಸಿದ್ದರಾಮಯ್ಯ ಅವರನ್ನು ಕರೆದು ಅಡಿಗಲ್ಲು ಹಾಕಿಸಿದೆವು ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕಕ್ಕೆ ಬಿಜೆಪಿ ಹಾನಿಕಾರಕ; ಕೇಂದ್ರ ಸರ್ಕಾರದ ಸೇಡು ಬಯಲಾಗಿದೆ- ರಣದೀಪ್ ಸಿಂಗ್ ಸುರ್ಜೇವಾಲಾ
ಯುಕೆಪಿಗೆ ಕಾಂಗ್ರೆಸ್ನಿಂದ ದ್ರೋಹ
ಈ ಬಾರಿ ಚುನಾವಣೆಯಲ್ಲಿ ಬಾಗಲಕೋಟೆಯಲ್ಲಿ ಯಾಕೆ ನಿಲ್ಲುತ್ತಿಲ್ಲ ಅಂತ ಪತ್ರಕರ್ತರು ಕೇಳಿದರೆ ಅವರು, ಬಾದಾಮಿ ಬಹಳ ದೂರ ಇದೆ. ಅಲ್ಲಿಗೆ ಹೋಗಲು ಆಗುವುದಿಲ್ಲ ಅಂತ ಹೇಳಿದರು. ಕಷ್ಟ ಕಾಲದಲ್ಲಿ ಕೈ ಹಿಡಿಬೇಕಾದರೆ ಬಾದಾಮಿ ಬೇಕಾಗಿತ್ತು. ಈಗ ಮುಖ್ಯಮಂತ್ರಿ ಆದ ಮೇಲೆ ಬಾದಾಮಿ ಬಾಗಲಕೋಟೆ ಬೇಕಾಗಿಲ್ಲ. ಇಂಥವರಿಗೆ ತಕ್ಕ ಪಾಠವನ್ನು ಕಲಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಯಾರಾದ್ರೂ ದ್ರೋಹ ಮಾಡಿದ್ದರೆ ಅದು ಕಾಂಗ್ರೆಸ್. ಇಷ್ಡು ದೊಡ್ಡ ಮೊತ್ತ ಖರ್ಚು ಮಾಡುವ ಪರಿಸ್ಥಿತಿ ಬಂದಿದ್ದರೆ. ಯೋಜನೆಯ ವೆಚ್ಚ ಹೆಚ್ಚಾಗಲು ನೇರವಾಗಿ ಕಾಂಗ್ರೆಸ್ ಸರ್ಕಾರ ಕಾರಣ. ಬಚಾವತ್ ಆಯೋಗದ ತೀರ್ಪು ಜಾರಿ ಮಾಡಲು 14 ವರ್ಷ ತೆಗೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬದಲಾವಣೆಗೆ ಕಾರಣಿಭೂತರಾಗಿ
ಮಹಿಳೆಯರ ಸುರಕ್ಷತೆಗೆ ರಾಜ್ಯ ಸರ್ಕಾರ ಗ್ಯಾರಂಟಿ ಕೊಡುತ್ತೀರಾ, ನಮ್ಮ ತಾಯಂದಿರಿಗೆ ಸುರಕ್ಷತೆಯಿಲ್ಲ. ಹೆಣ್ಣುಮಕ್ಕಳು ಹೊರಗಡೆ ಹೋದರೆ ಸುರಕ್ಷಿತವಾಗಿ ಬರುತ್ತಾರೆ ಎನ್ನುವ ಭರವಸೆ ಇಲ್ಲ. ಯಾವ ರಾಜ್ಯದಲ್ಲಿ ಹೆಣ್ಣುಮಕ್ಕಳು ಸುರಕ್ಷಿತ ಇರುವುದಿಲ್ಲವೋ ಅದೊಂದು ಸರ್ಕಾರ ಅಲ್ಲ. ಇದೊಂದು ಪಾಪರ್ ಸರ್ಕಾರ. ಸಿದ್ದರಾಮಯ್ಯ ಪಾಪರ್ ಸರ್ಕಾರದ ಮುಖ್ಯಸ್ಥ. ಅಧಿಕಾರದಿಂದ ಹೋದ್ಮೇಲೆ ಇವರು ಎಷ್ಟು ಸಾಲ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಈಗ ಬದಲಾವಣೆ ಆಗಬೇಕಿದೆ. ವೀರಣ್ಣ ಚರಂತಿಮಠ ಅವರಿಗೆ ಮತ ಹಾಕಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರ ತಂದು ಬದಲಾವಣೆಗೆ ಕಾರಣೀಭೂತರಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೆಂದ್ರ ಸಚಿವ ಪ್ರಹ್ಲಾದ್ ಜೋಶಿ, ಲೋಕಸಭಾ ಸದಸ್ಯರಾದ ಪಿ.ಸಿ ಗದ್ದಿಗೌಡ್ರ, ಗೋವಿಂದ ಕಾರಜೋಳ, ಅಭ್ಯರ್ಥಿಗಳಾದ ವೀರಣ್ಣ ಚರಂತಿಮಠ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

