ಗದಗ: ಬಿಜೆಪಿ ಸರ್ಕಾರ, ಹಗರಣಗಳ ಸರ್ಕಾರ. ಸಿ.ಎಂ.ಬೊಮ್ಮಾಯಿ ಅವರು ಎಲೆಕ್ಟೆಡ್ ಸಿಎಂ ಅಲ್ಲ, ಅಪಾಯಿಂಟೆಡ್ ಸಿಎಂ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದರು.
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮೆಡ್ಲೇರಿ ಸಿದ್ದೇಶ್ವರ ದೇವಸ್ಥಾನ ಉದ್ಘಾಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಹುದ್ದೆ ಅಕ್ರಮದ ಕುರಿತು ಸರ್ಕಾರದ ವಿರುದ್ಧ ಹರಿಹಾಯ್ದರು. ಬೊಮ್ಮಾಯಿ ಅವರೇ ಪೊಲೀಸ್ ಆಫೀಸರ್ಗಳನ್ನು ಯಾಕೆ ಟ್ರಾನ್ಸ್ಫರ್ ಮಾಡಿದ್ರಿ? ಅಕ್ರಮ ನಡೆದಿದೆಯೋ ಇಲ್ವೊ? ಅಕ್ರಮ ನಡೆದಿಲ್ಲ ಅನ್ನೋದಾದ್ರೆ ಲಿಸ್ಟ್ ಯಾಕೆ ರದ್ದು ಮಾಡಿದ್ರಿ? ಮರುಪರೀಕ್ಷೆಗೆ ಯಾಕೆ ಆದೇಶ ಮಾಡಿದ್ರಿ? ಸರ್ಕಾರ ಮಂತ್ರಿಗಳನ್ನು ರಕ್ಷಣೆ ಮಾಡ್ತಿದೆ. ಪ್ರಕರಣ ಮುಚ್ಚಿಹಾಕುವ ಪ್ರಯತ್ನವೂ ಮಾಡ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಸಂಪೂರ್ಣ ವಿಫಲ: ಧ್ರುವನಾರಾಯಣ್
ಸಚಿವ ಅಶ್ವಥ್ ನಾರಾಯಣ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಿಜೆಪಿಯವರಿಗೆ ಮಾನಮರ್ಯಾದೆ ಯಾವುದೂ ಇಲ್ಲ. ಅಶ್ವಥ್ ನಾರಾಯಣ ಅವರ ಇಬ್ಬರು ಸಂಬಂಧಿಕರು ಆಯ್ಕೆಯಾಗಿದ್ದಾರೆ. ಒಬ್ಬ 5ನೇ ರ್ಯಾಂಕ್, ಮತ್ತೊಬ್ಬ 10ನೇ ರ್ಯಾಂಕ್. ಇವರಿಬ್ಬರೂ ಸಚಿವರ ಸಂಬಂಧಿಕರು. ಅವರ ಹತ್ತಿರ ಅಶ್ವಥ್ ನಾರಾಯಣ ದುಡ್ಡು ತೆಗೆದುಕೊಂಡಿದ್ದಾನೆ ಎನ್ನುವ ಮಾಹಿತಿ ಇದೆ. ಆದರೆ ಪೊಲೀಸರು ಇವರನ್ನು ಕರೆದುಕೊಂಡು ಹೋದವರು, ಅವರನ್ನು ಯಾಕೆ ಬಿಟ್ಟರು? ಯಾರ ಪ್ರಭಾವದಿಂದ ಬಿಟ್ಟರು? ಬೇರೆಯವರನ್ನು ಅರೆಸ್ಟ್ ಮಾಡಿ ಜೈಲುಗೆ ಹಾಕಿದರು. ಇವರನ್ಯಾಕೆ ಬಿಟ್ಟರು ಎಂಬುದಕ್ಕೆ ಕಾರಣ ಕೊಡಲಿ ಎಂದು ಒತ್ತಾಯಿಸಿದರು.
ಅದಕ್ಕಾಗಿಯೇ ರಾಜೀನಾಮೆ ಕೊಡಿ ಅಂತಾ ಕೇಳಿದ್ದು. ಈ ಬಗ್ಗೆ ಸಿಐಡಿಯಿಂದ ತನಿಖೆ ಮಾಡಿದರೆ ಆಗಲ್ಲ. ಅಮೃತ್ ಪೌಲ್ ಅವರನ್ನು ಯಾಕೆ ವರ್ಗಾವಣೆ ಮಾಡಿದ್ರು? ಡಿವೈಎಸ್ಪಿ ಅವರನ್ನು ಅರೆಸ್ಟ್ ಮಾಡಿದ್ರು ಯಾಕೆ? ಭ್ರಷ್ಟಾಚಾರ, ಅಕ್ರಮ ನಡೆದಿದೆ. ಇದರಲ್ಲಿ ಸರ್ಕಾರ, ಮಂತ್ರಿಗಳು ಶಾಮೀಲಾಗಿದ್ದಾರೆ. ಮಂತ್ರಿಗಳಿಗೆ ಗೊತ್ತಿಲ್ಲದೇ ಅಕ್ರಮ ನಡೆಯುತ್ತಾ? ಹೀಗಾಗಿ ಪ್ರಕರಣದ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: 2,500 ಕೋಟಿ ಕೊಡಿ ನಿಮ್ಮನ್ನೂ ಸಿಎಂ ಮಾಡ್ತೀವಿ ಅಂದ್ರು: ಬಾಂಬ್ ಸಿಡಿಸಿದ ಯತ್ನಾಳ್
ಪ್ರಕರಣದಲ್ಲಿ ಭಾಗಿಯಾದವರು ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡುತ್ತೇವೆ ಎಂದಿದ್ದ ಗೃಹ ಸಚಿವರಿಗೆ ಮಾತಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಹೋಮ್ ಮಿನಿಸ್ಟರ್ ಮೊದಲು ರಾಜೀನಾಮೆ ಕೊಡಪ್ಪ. ಆಮೇಲೆ ಮುಟ್ಟಿ ನೋಡಿಕೊಳ್ಳುವಂತೆ ಮಾಡುವೆಯಂತೆ ಎಂದು ಚಾಟಿ ಬೀಸಿದರು.
ಮುಖ್ಯಮಂತ್ರಿ ಆಗಲು 2,500 ಕೋಟಿ ರೂ. ಬೇಡಿಕೆ ಬಗ್ಗೆ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ಕುರಿತು ಮಾತನಾಡಿ, ಯತ್ನಾಳ್ ಅವರು ಬಿಜೆಪಿ ಹಿರಿಯ ನಾಯಕ. ಕೇಂದ್ರದ ಮಾಜಿ ಮಂತ್ರಿ, ಅವರು ಹೇಳ್ತಾರೆ ಅಂದ್ರೆ ಸತ್ಯ ಇರಬಹುದು ಎಂದರು.