ಧಾರವಾಡ: ಜಿಲ್ಲೆಯ ಮನಗುಂಡಿ ಶ್ರೀ ಬಸವಾನಂದ ಸ್ವಾಮೀಜಿ ಯವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಅವರಿಗೂ ಪತ್ರವನ್ನು ಬರೆದಿದ್ದಾರೆ.
ಧಾರವಾಡ ತಾಲೂಕಿನ ಮನಗುಂಡಿಯಲ್ಲಿ ಶ್ರೀ ಗುರು ಬಸವ ಮಹಾಮನೆ ಆಶ್ರಮ ಹೊಂದಿರುವ ಶ್ರೀ ಬಸವಾನಂದ ಸ್ವಾಮೀಜಿ, ತನಗೆ ದೃಷ್ಟಿ ಇಲ್ಲದೇ ಇದ್ದರೂ ಕಲಘಟಗಿ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದೇನೆ ಎಂದು ಅಮಿತ್ ಶಾಗೆ ಪತ್ರವನ್ನು ಬರೆದಿದ್ದಾರೆ.
ಸ್ವಾಮೀಜಿಗಳು ಬರೆದಿರುವ ಮೂರು ಪುಟಗಳ ಸುದೀರ್ಘ ಪತ್ರದಲ್ಲಿ ಇತ್ತೀಚೆಗೆ ಉತ್ತರ ಪ್ರದೇಶದ ರಾಜಕೀಯದಲ್ಲಾಗಿರುವ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧಿಸಿದಂತೆ ಕೆಲ ಸಲಹೆಗಳನ್ನು ನೀಡಿದ್ದಾರೆ.
ಸಲಹೆ ಏನು?
ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವ ಮುಂಚೆ ಆಕಾಂಕ್ಷಿಗಳಿಗೆ ಒಂದು ಪರೀಕ್ಷೆ ನಡೆಸಬೇಕು. ಆ ಪರೀಕ್ಷೆಗೆ ತಲಾ ಒಂದು ಲಕ್ಷ ರೂಪಾಯಿ ಶುಲ್ಕ ವಿಧಿಸಬೇಕು. ಅದಕ್ಕಾಗಿಯೇ ಒಂದು ಪರೀಕ್ಷಾ ಸಮಿತಿ ರಚಿಸಬೇಕು. ದೇಶಭಕ್ತಿ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ವಿದ್ಯಮಾನಗಳಿಗೆ ಸಂಬಂಧಿಸಿದ ಅರಿವು ಸೇರಿದಂತೆ ಬಿಜೆಪಿ ಪಕ್ಷವು ನಡೆದು ಬಂದ ದಾರಿ ಹಾಗೂ ಪ್ರಾದೇಶಿಕ ವಿಷಯಗಳ ಕುರಿತು ಪ್ರಶ್ನೆಗಳಿರಬೇಕು.
ಪರೀಕ್ಷೆ ನಡೆಸುವ ಕಾರಣ ಒಂದು ಪುಸ್ತಕ ಪ್ರಕಟಿಸುವುದು ಸೂಕ್ತ. ಈ ರೀತಿ ಮಾಡುವುದರಿಂದ 224 ಕ್ಷೇತ್ರಗಳಿಗೆ ಏನಿಲ್ಲವಾದರೂ ಸಾವಿರದ ಐನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದು. ಇದರಿಂದ ಪಕ್ಷದ ಖಜಾನೆಗೂ 15 ರಿಂದ 20 ಕೋಟಿ ರೂ. ಸಂಗ್ರಹವಾಗುತ್ತದೆ. ಅಲ್ಲದೇ ಒಳ್ಳೆಯ ಅಭ್ಯರ್ಥಿಗಳು ಸಹ ಕಣದಲ್ಲಿರುತ್ತಾರೆ ಎಂದು ಸ್ವಾಮೀಜಿ ಅಮಿತ್ ಶಾ ಅವರಿಗೆ ಸಲಹೆ ನೀಡಿದ್ದಾರೆ.